ವಾಡಿ (ಕಲಬುರ್ಗಿ ಜಿಲ್ಲೆ): ಪಟ್ಟಣದ ಎಸಿಸಿ ಸಿಮೆಂಟ್ ಕಾರ್ಖಾನೆಯಲ್ಲಿ ಶುಕ್ರವಾರ ಬೆಳಗಿನ ಜಾವ ದಿನಗೂಲಿ ಕಾರ್ಮಿಕರೊಬ್ಬರು ಕೆಲಸ ಮಾಡುತ್ತಿದ್ದ ವೇಳೆ ಯಂತ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.
ಇಂಗಳಗಿ ಗ್ರಾಮದ ನಿವಾಸಿ ಸುಭಾಷ ರಾಠೋಡ (51) ಮೃತರು.
ಕಂಪನಿಯ ತಾಜ್ ಗ್ರೂಪ್ ಗುತ್ತಿಗೆ ಕಾರ್ಮಿಕ ಸುಭಾಷ ರಾಠೋಡ ರಾತ್ರಿ ಪಾಳಿ ಕೆಲಸಕ್ಕೆ ಹಾಜರಾಗಿದ್ದರು. ಗೂಡ್ಸ್ ರೈಲಿಗೆ ಸಿಮೆಂಟ್ ಚೀಲಗಳ ಲೋಡಿಂಗ್ ಮಾಡುತ್ತಿದ್ದ ವೇಳೆ ಬೆಲ್ಟ್ ಮತ್ತು ಯಂತ್ರದ ಹೊಡೆತಕ್ಕೆ ಸಿಲುಕಿ 25 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದಾರೆ. ಸುಡುವ ಸಿಮೆಂಟ್ ಧೂಳಿನಲ್ಲಿ ಬಿದ್ದಾಗ ಉಸಿರಾಟದ ಮೂಲಕ ಸಿಮೆಂಟ್ ದೇಹ ಸೇರಿದೆ. ಅದರ ಜೊತೆಗೆ ರೈಲು ಹಳಿಗೆ ತಲೆ ಪೆಟ್ಟಾಗಿ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಕಂಪನಿ ಮೂಲಗಳು ತಿಳಿಸಿವೆ.
ವಿಷಯ ತಿಳಿದು ಕಂಪನಿ ಅಧಿಕಾರಿಗಳು ಹಾಗೂ ಕಾರ್ಮಿಕ ಮುಖಂಡರು ಸ್ಥಳಕ್ಕೆ ಭೇಟಿ ನೀಡಿದರು. ನೂರಾರು ಕಾರ್ಮಿಕರು ಮತ್ತು ಮೃತ ಕಾರ್ಮಿಕನ ಸಂಬಂಧಿಕರು ಕಂಪನಿ ಮುಂದೆ ಜಮಾವಣೆಗೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.