ಕಲಬುರ್ಗಿ: ನಗರದಿಂದ ಫರಹತಾಬಾದ್ ಗ್ರಾಮದತ್ತ ಹೊರಟಿದ್ದ ದಕ್ಷಿಣ ಕನ್ನಡ ಜಿಲ್ಲೆಯ ನೋಂದಣಿ ಸಂಖ್ಯೆ ಹೊಂದಿದ್ದ ಟ್ಯಾಂಕರ್ ಲಾರಿಯೊಂದು ಬಸ್ ನಿಲ್ದಾಣದ ಪಕ್ಕದಲ್ಲಿ ನಿಂತಿದ್ದ ಬಾಲಕನಿಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಶುಕ್ರವಾರ ಬೆಳಿಗ್ಗೆ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ತೆಲಂಗಾಣ ರಾಜ್ಯದ ಕಾಮರೆಡ್ಡಿ ಜಿಲ್ಲೆಯ ಮದನೂರ ತಾಲ್ಲೂಕಿನ ವಿಠಲವಾಡಿ ಗ್ರಾಮದ ಅರವಿಂದ ಲಕ್ಷ್ಮಣ ರಾಠೋಡ (8) ಲಾರಿಗೆ ಬಲಿಯಾದ ಯುವಕ. ಯಡ್ರಾಮಿ ತಾಲ್ಲೂಕಿನ ಮಾಗಣಗೇರಿಯಲ್ಲಿ ಸಿದ್ದಣ್ಣಗೌಡ ಎಂಬುವವರ ಹೊಲದಲ್ಲಿ ಕಬ್ಬು ಕಟಾವಿಗಾಗಿ ತಂದೆ ಲಕ್ಷ್ಮಣ ರಾಠೋಡ ಹಾಗೂ ಕುಟುಂಬದೊಂದಿಗೆ ಅರವಿಂದ ಬಂದಿದ್ದ. ಕಲಬುರ್ಗಿಯಿಂದ ಯಡ್ರಾಮಿಗೆ ತೆರಳುವ ಮಾರ್ಗದಲ್ಲಿ ಇವರು ಹೊರಟಿದ್ದ ವಾಹನ ಕೆಟ್ಟು ನಿಂತಿತು. ಹೀಗಾಗಿ, ಅದು ದುರಸ್ತಿಯಾಗುವ ತನಕ ಫರಹತಾಬಾದ್ ಗ್ರಾಮ ತಲುಪುವುದಕ್ಕೂ ಮುಂಚೆ ಇರುವ ಬಸ್ ನಿಲ್ದಾಣದ ಬಳಿ ಚಹಾ ಕುಡಿಯಲು ನಿಂತಾಗ ಘಟನೆ ನಡೆದಿದೆ.
ನಿರ್ಲಕ್ಷ್ಯತನದಿಂದ ವಾಹನ ಚಲಾಯಿಸಿದ ಆರೋಪದ ಮೇರೆಗೆ ಲಾರಿ ಚಾಲಕ ಅಕ್ಷಯ್ ರಾಧಾಕೃಷ್ಣ ಎಂಬಾತನನ್ನು ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.