ADVERTISEMENT

ಗ್ರಾ.ಪಂ. ಮಟ್ಟದಲ್ಲಿ ಕೃಷಿ ಪರಿಕರಗಳು: ಡಾ. ರತೇಂದ್ರನಾಥ ಸೂಗುರ

ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ರತೇಂದ್ರನಾಥ ಸೂಗುರ ಅವರೊಂದಿಗೆ ಪ್ರಜಾವಾಣಿ ಫೋನ್ ಇನ್

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 16:37 IST
Last Updated 29 ಜೂನ್ 2021, 16:37 IST
ರತೇಂದ್ರನಾಥ ಸೂಗುರ
ರತೇಂದ್ರನಾಥ ಸೂಗುರ   

ಕಲಬುರ್ಗಿ: ರೈತರ ಹೊಲಗಳ ಹದ ಮಾಡುವುದು, ಬಿತ್ತನೆ, ಕಟಾವಿಗಾಗಿ ಅಗತ್ಯವಾದ ಕೃಷಿ ಯಂತ್ರೋಪಕರಣಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಒದಗಿಸಲು ಕೃಷಿ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಇಲಾಖೆಯ ಜಂಟಿ ನಿರ್ದೇಶಕ ಡಾ. ರತೇಂದ್ರನಾಥ ಸೂಗುರತಿಳಿಸಿದರು.

ಮಂಗಳವಾರ ಆಯೋಜಿಸಿದ್ದ ‘ಪ್ರಜಾವಾಣಿ’ ಫೋನ್‌ ಇನ್‌ನಲ್ಲಿ ರೈತರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಕ್ಲಾಸ್, ಮಹಿಂದ್ರ ಅಂಡ್ ಮಹಿಂದ್ರ ಸೇರಿದಂತೆ ಬೃಹತ್ ಕಂಪನಿಗಳಿಗೆ ಇಲಾಖೆಯಿಂದ ಯಂತ್ರೋಪಕರಣಗಳನ್ನು ಒದಗಿಸಲು ಅನುಮತಿ ನೀಡಲಾಗಿದೆ. ಪ್ರಸ್ತುತ ಕೃಷಿ ಯಂತ್ರಧಾರೆ ಯೋಜನೆಯಡಿ ಟ್ರ್ಯಾಕ್ಟರ್, ರೋಟಾವೇಟರ್, ಟಿಲ್ಲರ್, ಕಲ್ಟಿವೇಟರ್‌ನಂತಹ ಯಂತ್ರಗಳನ್ನು ಹೋಬಳಿ ಮಟ್ಟದಲ್ಲಿ ವಿತರಿಸಲಾಗುತ್ತಿದೆ. ಫ್ರಾಂಚೈಸಿ ಪಡೆದವರು ಸುಮಾರು 20 ಎಕರೆಗಿಂತ ಹೆಚ್ಚಿನ ಹೊಲದಲ್ಲಿ ಕೆಲಸ ಇದ್ದರೆ ಮಾತ್ರ ಹೋಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೋಬಳಿ ಬದಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೃಷಿ ಯಂತ್ರಧಾರೆ ಒದಗಿಸಲು ಸಂಸ್ಥೆಗಳಿಗೆ ಫ್ರಾಂಚೈಸಿ ನೀಡಲಾಗುವುದು ಎಂದರು.

ಕೃಷಿ ಯಂತ್ರಧಾರೆ ಯೋಜನೆಗೆ ಭಾರಿ ಬೇಡಿಕೆಯಿದ್ದು, ದುಬಾರಿ ಯಂತ್ರಗಳನ್ನು ಖರೀದಿಸಲು ಆಗದ ರೈತರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ತೊಗರಿ ರಾಶಿ ಮಾಡುವ ಸುಮಾರು 16 ಯಂತ್ರಗಳು ನಮ್ಮ ಬಳಿ ಇದ್ದು, ಜಿಲ್ಲೆಯಾದ್ಯಂತ ಸಂಚರಿಸಿ ರೈತರಿಗೆ ಕಡಿಮೆ ದರದಲ್ಲಿ ತೊಗರಿ ಕಟಾವು ಮಾಡಿಕೊಟ್ಟಿವೆ ಎಂದು ತಿಳಿಸಿದರು.

ADVERTISEMENT

ಫೋನ್‌ ಇನ್‌ನಲ್ಲಿ ಕೇಳಲಾದ ಆಯ್ದ ಪ್ರಶ್ನೆಗಳು ಹಾಗೂ ಅದಕ್ಕೆ ನೀಡಲಾದ ಪ್ರತಿಕ್ರಿಯೆಗಳು ಇಂತಿವೆ.

* ಕೃಷಿ ಹೊಂಡ ನಿರ್ಮಾಣ ಏಕೆ ಕೈಬಿಡಲಾಗಿದೆ? ಬೇರೆ ಯೋಜನೆಗಳು ಏನಿವೆ?

–‘ಕೃಷಿ ಭಾಗ್ಯ’ ಯೋಜನೆ ಅಡಿ ಕೃಷಿ ಹೊಂಡ ನಿರ್ಮಾಣ ಮಾಡಿ ಕೊಡುವ ಯೋಜನೆಯನ್ನು ಸರ್ಕಾರ ತಾತ್ಕಾಲಿಕವಾಗಿ ನಿಲ್ಲಿಸಿದೆ. ಮರು ಆರಂಭವಾದಾಗ ರೈತರಿಗೆ ಮಾಹಿತಿ ನೀಡುತ್ತೇವೆ. ಅಲ್ಲದೇ, ಇಲಾಖೆಯಿಂದ ನೀರಾವರಿಗಾಗಿ ಹನಿ ನೀರಾವರಿ ಮತ್ತು ತುಂತುರು ನೀರಾವರಿಯ ಸಲಕರಣೆಗಳನ್ನು ನೀಡಲಾಗುತ್ತಿದೆ. ಆದರೆ, ತುಂತುರು ಸಲಕರಣೆಗಳು ಕಡಿಮೆ ಖರ್ಚಿನಲ್ಲಿ ಹೆಚ್ಚು ಜನರಿಗೆ ತಲುಪುತ್ತವೆ. ಒಂದು ಎಕರೆ ಹನಿ ನೀರಾವರಿಯಷ್ಟೇ ವೆಚ್ಚದಲ್ಲಿ ಐದು ಎಕರೆ ಸ್ಪಿಂಕ್ಲರ್‌ಗೆ ಸಲಕರಣೆ ನೀಡಬಹುದು. ಹಾಗಾಗಿ, ರೈತರು ಅದನ್ನು ಹೆಚ್ಚು ಬಳಸಿಕೊಳ್ಳುವುದು ಸೂಕ್ತ.

* ಕಿಸಾನ್ ಸಮ್ಮಾನ್ ಯೋಜನೆಯಡಿ ಹಣ ಬಂದಿಲ್ಲ
–ಜಮೀನಿನ ಪಹಣಿ ತನ್ನ ಹೆಸರಿನಲ್ಲೇ ಇರುವ ರೈತನಿಗೆ ಕಿಸಾನ್ ಸಮ್ಮಾನ್‌ ಯೋಜನೆಯಡಿ ಕೇಂದ್ರ ಸರ್ಕಾರ ವರ್ಷಕ್ಕೆ ₹ 6 ಸಾವಿರ, ರಾಜ್ಯ ಸರ್ಕಾರ ₹ 4 ಸಾವಿರ ಆರ್ಥಿಕ ನೆರವನ್ನು ನೀಡುತ್ತದೆ. ಆಧಾರ್ ಲಿಂಕ್ ಹೊಂದಿದ ಬ್ಯಾಂಕ್‌ ಪಾಸ್‌ಬುಕ್ ಹಾಗೂ ಜಮೀನಿನ ಪಹಣಿ ನೀಡಿದರೆ ಅದನ್ನು ಕೇಂದ್ರ ಕೃಷಿ ಇಲಾಖೆಗೆ ಕಳುಹಿಸಿಕೊಡಲಾಗುವುದು. ಜಿಲ್ಲೆಯಲ್ಲಿ ಅತಿ ಹೆಚ್ಚು ಫಲಾನುಭವಿಗಳು ಕಿಸಾನ್ ಸಮ್ಮಾನ್ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಸೂಕ್ತ ದಾಖಲೆಗಳನ್ನು ಸಲ್ಲಿಸದವರ ಖಾತೆಗೆ ಹಣ ಬಂದಿಲ್ಲ. ಇಂತಹ ದೂರುಗಳನ್ನೂ ಆದ್ಯತೆಯ ಮೇಲೆ ಪರಿಹರಿಸಲಾಗುತ್ತಿದೆ. ಅಂತಹ ರೈತರು ತಮ್ಮ ಸಮೀಪದ ಕೃಷಿ ಸಹಾಯಕ ನಿರ್ದೇಶಕರ ಕಚೇರಿ ಅಥವಾ ಕಲಬುರ್ಗಿಯಲ್ಲಿರುವ ಜಂಟಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿದರೆ ಅಗತ್ಯ ನೆರವು ನೀಡುತ್ತೇವೆ.

* ನಾಲ್ಕೈದು ಎಕರೆ ಹೊಲದ ಉಳುಮೆಗೆ ಬರಲು ಕೃಷಿ ಯಂತ್ರಧಾರೆಯವರು ಹಿಂದೇಟು ಹಾಕುತ್ತಿದ್ದಾರೆ.

–ಈ ಬಗ್ಗೆ ಸಂಬಂಧಪಟ್ಟ ಫ್ರಾಂಚೈಸಿಯವರಿಗೆ ಕರೆ ಮಾಡಿ ಸೂಚನೆ ನೀಡುತ್ತೇನೆ. ರೈತರ ಅನುಕೂಲಕ್ಕಾಗಿ ಕೃಷಿ ಪರಿಕರ ಒದಗಿಸುವ ಯೋಜನೆ ರೂಪಿಸಲಾಗಿದೆ. ಹೀಗಾಗಿ, ರೈತರು ಕರೆದರೆ ಕೃಷಿ ಯಂತ್ರೋಪಕರಣಗಳನ್ನು ಒದಗಿಸುವ ಒಪ್ಪಂದ ಮಾಡಿಕೊಂಡ ಕಂಪನಿಯವರು ಹೋಗಬೇಕು.

* ಜಿಲ್ಲೆಯಲ್ಲಿ ಸೋಯಾಬಿನ್‌ ಬೆಳೆಯುವವರ ಸಂಖ್ಯೆ ಹೆಚ್ಚಾಗಿದೆ, ಆದರೆ ರೈತರಿಗೆ ಇದರ ಸರಿಯಾದ ಮಾಹಿತಿ ಇಲ್ಲದಿರುವುದು ಮುಂದೆ ನಷ್ಟಕ್ಕೆ ಈಡು ಮಾಡಬಹುದಲ್ಲವೇ?

–ಹೌದು. ಮಾರುಕಟ್ಟೆಯಲ್ಲಿ ಈಗ ಕ್ವಿಂಟಲ್‌ ಸೋಯಾಗೆ ₹ 7,000ರಿಂದ ₹ 8000 ದರ ಸಿಗುತ್ತಿದೆ. ಕೇವಲ 100 ದಿನದಲ್ಲಿ ಈ ಬೆಳೆ ಬರುತ್ತದೆ. ಈ ಬೆಳೆ ತೆಗೆದ ಬಳಿಕ ಮತ್ತೆ ಎರಡನೇ ಬೆಳೆ ಹಾಕಬಹುದು. ಸಹಜವಾಗಿಯೇ ತೊಗರಿ ನಾಡಿನ ಹಲವು ರೈತರು ಸೋಯಾ ಬೆಳೆಗೆ ಮುಂದಾಗಿದ್ದಾರೆ. ಇದೂ ಸೇರಿದ ಹಾಗೆ ಮುಂಗಾರಿನ ಹಲವು ಬೆಳೆಗಳ ಬಗ್ಗೆ ರೈತರಿಗೆ ತರಬೇತಿ, ಮಾಹಿತಿ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಇಲಾಖೆಯಿಂದ ಈ ಕೆಲಸವನ್ನೂ ಮಾಡಲಾಗುವುದು.

* ಜಿಲ್ಲೆಯಲ್ಲಿ ಯಾರೂ ರೇಷ್ಮೆ ಖರೀದಿಸುತ್ತಿಲ್ಲ. ಬೆಂಗಳೂರಿಗೆ ಸರಬರಾಜು ಮಾಡಲು ಸಾಕಷ್ಟು ಖರ್ಚಾಗುತ್ತದೆ. ನಮಗೆ ಸಹಾಯ ಮಾಡಲು ಸಾಧ್ಯವೇ?

–ಬೆಂಗಳೂರಿನ ಯಶವಂತಪುರ ಹಾಗೂ ರಾಮನಗರದಲ್ಲಿ ಮಾತ್ರ ರೇಷ್ಮೆ ಮಾರ್ಕೆಟ್‌ ಇದೆ. ಜಿಲ್ಲೆಯಲ್ಲಿ ಈ ಕೃಷಿಗೆ ಮನಸ್ಸು ಮಾಡಿದ ರೈತರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಹಾಗಾಗಿ, ಇಲ್ಲಿ ಮಾರುಕಟ್ಟೆ ಸಿಗುವುದು ಕಷ್ಟ. ನಾಲ್ಕೈದು ರೈತರು ಒಂದಾಗಿ ಸರಬರಾಜು ಮಾಡುವ ರೂಢಿ ಮಾಡಿಕೊಂಡರೆ ಹಾನಿಯಿಂದ ಪಾರಾಗಬಹುದು. ಕಲಬುರ್ಗಿಯಲ್ಲಿ ರೇಷ್ಮೆ ಉಪ ಮಾರುಕಟ್ಟೆ ಆರಂಭಿಸಲು ರೇಷ್ಮೆ ಆಯುಕ್ತರಿಗೆ ಪತ್ರ ಬರೆಯುತ್ತೇನೆ.

* ಫಸಲ್‌ ಬಿಮಾ ಮಾಡಿಸಲು ಇನ್ನೂ ಎಷ್ಟು ಸಮಯ ಇದೆ?

–ಪಸಲ್‌ ಬಿಮಾ ಮಾಡಿಸಲು ಜುಲೈ 31ರವರೆಗೂ ಅವಕಾಶವಿದೆ. ಜುಲೈ 15ರ ವೇಳೆಗೆ ಇದರ ಪ್ರಕ್ರಿಯೆಗಳು ಆರಂಭವಾಗಲಿವೆ.

* ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಡಿಎಪಿ ಗೊಬ್ಬರ ಸಿಗುತ್ತಿಲ್ಲ

–ಏಪ್ರಿಲ್, ಮೇ ತಿಂಗಳಿಂದಲೇ ಜಿಲ್ಲೆಗೆ ಡಿಎಪಿ ಗೊಬ್ಬರ ಬರಬೇಕಿತ್ತು. ಆದರೆ, ಸರ್ಕಾರ ಸಬ್ಸಿಡಿಯನ್ನು ಘೋಷಿಸುವುದನ್ನು ಕಾಯುತ್ತಿದ್ದ ಕಂಪನಿಗಳು ತಯಾರಿಕೆಯನ್ನು ಸಕಾಲಕ್ಕೆ ಮಾಡಲಿಲ್ಲ. ಹೀಗಾಗಿ, ಜಿಲ್ಲೆಗೆ ಮುಂಚೆಯೇ ಬರಬೇಕಿದ್ದ ಡಿಎಪಿ ಗೊಬ್ಬರ ಬರಲಿಲ್ಲ. ಇದೀಗ ಬರುತ್ತಿದೆ. ಕಲಬುರ್ಗಿಯಲ್ಲಿ ಗೊಬ್ಬರ ಲಭ್ಯವಿದೆ. ನಗರಕ್ಕೆ ಬಂದು ಒಯ್ಯಬಹುದು. ಸಿಗದಿದ್ದರೆ ಹೇಳಿ, ಗೊಬ್ಬರದ ಅಂಗಡಿಯವರಿಗೆ ಹೇಳಿ ಕೊಡಿಸುವ ವ್ಯವಸ್ಥೆ ಮಾಡುತ್ತೇವೆ.

ಸೋಯಾ ಬೀಜ ದಾಸ್ತಾನಿಲ್ಲ
ಜಿಲ್ಲೆಯಲ್ಲಿ ಸೋಯಾ ಬೀಜದ ಲಭ್ಯತೆ ಬೇಡಿಕೆಗೆ ತಕ್ಕಂತೆ ಇಲ್ಲ. ಮಧ್ಯಪ್ರದೇಶದ ಖಾಂಡ್ವಾದಿಂದಲೇ ಬೀಜ ಉತ್ಪಾದನೆಯಾಗಿ ಬರಬೇಕು. ಅಲ್ಲಿಯೂ ಉತ್ಪಾದನೆಯಾದ ಎಲ್ಲ ಬೀಜಗಳನ್ನು ರಾಜ್ಯಗಳಿಗೆ ಪೂರೈಕೆ ಮಾಡಲಾಗಿದೆ. ಸರಿಯಾಗಿ ಬೆಳೆಯದ ಬೀಜಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಅವುಗಳನ್ನು ನಾವು ಶಿಫಾರಸು ಮಾಡುವುದಿಲ್ಲ. ಏಕೆಂದರೆ, ನಾಳೆ ಸರಿಯಾಗಿ ಬೆಳೆ ಬಾರದಿದ್ದರೆ ರೈತರು ನಷ್ಟಕ್ಕೀಡಾಗುತ್ತಾರೆ. ಇದು ಆಗಬಾರದೆಂದರೆ ಸೋಯಾ ಬದಲು ಪರ್ಯಾಯ ಬೆಳೆಯನ್ನು ಬೆಳೆಯುವುದು ಸೂಕ್ತ ಎಂದು ಸೂಗುರ ರೈತರಿಗೆ ಮನವಿ ಮಾಡಿದರು.

32 ಕ್ರಿಮಿನಲ್ ಪ್ರಕರಣ ದಾಖಲು
ಕಳಪೆ ಬೀಜ, ಗೊಬ್ಬರ ಹಾಗೂ ಕೀಟನಾಶಕಗಳನ್ನು ವಿತರಿಸಿದ ಅಂಗಡಿಗಳ ವಿರುದ್ಧ ನ್ಯಾಯಾಲಯದಲ್ಲಿ 32 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಕಳಪೆ ರಸಗೊಬ್ಬರ ಎಂದು ಕಂಡು ಬಂದ103 ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಪ್ರಯೋಗಾಲಯದಿಂದ ಫಲಿತಾಂಶ ಬಂದ ಬಳಿಕ ಅಂಥ ರಸಗೊಬ್ಬರ ಮಾರಾಟ ಮಾಡುತ್ತಿರುವ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕ ಹೇಳಿದರು.

ಕಿಸಾನ್ ಸಮ್ಮಾನ್: ಜಿಲ್ಲೆಗೆ ₹ 516 ಕೋಟಿ
ಕಲಬುರ್ಗಿ ಜಿಲ್ಲೆಯ ರೈತರ ಖಾತೆಗಳಿಗೆ ಇದುವರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ₹ 516 ಕೋಟಿ ಕಿಸಾನ್ ಸಮ್ಮಾನ್ ಯೋಜನೆಯಡಿ ಹಣವನ್ನು ಪಾವತಿ ಮಾಡಿವೆ. ಕೇಂದ್ರ ಸರ್ಕಾರ 2,64,362 ರೈತರಿಗೆ ₹ 336 ಕೋಟಿ, ರಾಜ್ಯ ಸರ್ಕಾರ 2.37,098 ರೈತರಿಗೆ ₹ 180.58 ಕೋಟಿ ಹಣವನ್ನು ಮಂಜೂರು ಮಾಡಿದೆ. ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಪೈಕಿ ಕಲಬುರ್ಗಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ರೈತರನ್ನು ಕಿಸಾನ್ ಸಮ್ಮಾನ್ ಯೋಜನೆಗೆ ನೋಂದಾಯಿಸಲಾಗಿದೆ. ಒಂದು ಬಾರಿ ಬಿಡುಗಡೆಯಾದರೆ ಜಿಲ್ಲೆಗೆ ₹ 60 ಕೋಟಿ ಬಿಡುಗಡೆಯಾಗುತ್ತದೆ ಎಂದು ಡಾ. ರತೇಂದ್ರನಾಥ ಸೂಗುರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.