
ಆಳಂದ: ತಾಲ್ಲೂಕಿನ ವಿವಿಧೆಡೆ ಸೋಮವಾರ ರಾತ್ರಿ ಸುರಿದ ಅಕಾಲಿಕ ಮಳೆ, ಗಾಳಿಗೆ ಮಾದನಹಿಪ್ಪರಗಿ ವಲಯದಲ್ಲಿ ರೈತರ ಹೊಲಗದ್ದೆಗಳ ಬೆಳೆಗಳು ನೆಲಕ್ಕುರುಳಿದ್ದು, ಮಳೆಗೆ ಹಾನಿಯಾಗಿರುವದು ರೈತರಲ್ಲಿ ಸಂಕಟ ಮೂಡಿಸಿದೆ.
ಸೋಮವಾರ ಸಂಜೆ ಗುಡುಗು ಮಿಂಚು ಬಿರುಗಾಳಿಯೊಂದಿಗೆ ಅಬ್ಬರಿಸಿದ ಮಳೆ ರೈತರು ಬೆಳೆದ ಗೋಧಿ, ಜೋಳ, ಕಡಲೆ ಬೆಳೆಗಳನ್ನು ಸಂಪೂರ್ಣವಾಗಿ ಮಣ್ಣು ಪಾಲಾಗಿ ಬಿಟ್ಟಿವೆ. ಝಳಕಿ, ಮದಗುಣಕಿ, ಚಲಗೇರಿ, ನಿಂಬಾಳ ನಿಂಗದಳ್ಳಿ, ದರ್ಗಾಶಿರೂರ ಮೋಘಾ, ಇಕ್ಕಳಕಿ ಅಲ್ಲದೆ ಸುತ್ತಲಿನ ಗ್ರಾಮದ ರೈತರು ಬೆಳೆದ ಬೆಳೆಗಳು ನಾಶವಾಗಿವೆ.
ಮಾದನ ಹಿಪ್ಪರಗಿ ವಲಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗೋಧಿ ಬಿತ್ತನೆ ಮಾಡಲಾಗಿತ್ತು. ಜೊತೆಗೆ ಜೋಳ ಮತ್ತು ಕಡಲೆ ಬಿತ್ತಿದ್ದರು. ಇನ್ನು ಕೇವಲ ಒಂದು ವಾರದೊಳಗೆ ಗೋಧಿ ರಾಶಿ ಮಾಡಿ ಜೋಳದ ರಾಶಿಯೂ ನಡೆಯುತ್ತಿತ್ತು. ಅಷ್ಟರಲ್ಲಿಯೇ ಮಳೆರಾಯ ಬಂದು ಎಲ್ಲವನ್ನು ಹಾಳುಮಾಡಿದೆ.
ಗ್ರಾಮದ ಗುರುಸಿದ್ದ ಭದ್ರಪ್ಪ ಓನಮಶೆಟ್ಟಿ, ಧನರಾಜ ಖೈರಾಟೆ, ಮುತ್ತಣ್ಣ ಸಲಗರ ಇವರು ಗೋಧಿ ಕೊಯ್ದು ರಾಶಿ ಮಾಡುವವರಿದ್ದರು. ಮಳೆ ಬಂದು ಹೊಲದ ತುಂಬಾ ನೀರು ನಿಂತಿವೆ. ಜೋಳದ ಹೊಲ ನೆಲಕ್ಕೆ ಉರುಳಿ ಸಮತಟ್ಟಾಗಿದೆ. ಕೊಯ್ಸಿಕೊಂಡಿದ್ದ ಗೋಧಿ ಮಳೆಗೆ ತೊಯ್ದು ಹೋಗಿದೆ. ಕೊಯ್ಲಿಗೆ ಬಂದ ಜೋಳ ದಂಟುಗಳು ಉರುಳಿ ನೆಲಕ್ಕೆ ಮಲಗಿವೆ.
ಹೆಚ್ಚಿನ ಪ್ರಮಾಣದಲ್ಲಿ ತೋಟಗಾರಿಕೆ ಬೆಳೆಗಾಳದ ದ್ರಾಕ್ಷಿ ಬೆಳೆಯುವ ರೈತರಿಗೂ ಮೋಡ ಕವಿದ ವಾತಾವರಣವು ಆತಂಕ ಮೂಡಿಸಿದೆ. ಮಳೆ ಬಂದರೆ ಕೈಗೆ ಬಂದು ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತ ಸ್ಥಿತಿ ನಿರ್ಮಾಣವಾಗಲಿದೆ. ರಂಜಾನ್ ಮಾಸವಾದರಿಂದ ದ್ರಾಕ್ಷಿ, ಕಲ್ಲಂಗಡಿ ಬೆಳೆಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ, ಅಕಾಲಿಕ ಮಳೆಯು ಅಪಾಯ ತರಲಿದೆ ಎನ್ನುವದು ರೈತರ ಆತಂಕ. ಜತೆಯಲ್ಲಿ ತರಕಾರಿ ಬೆಳೆಗಾರರಲ್ಲಿಯು ಮಳೆ ಆತಂಕ ತಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.