ಆಳಂದ: ಯಾದಗಿರಿ ಜಿಲ್ಲೆ ನಜರಾಪುರ ಗ್ರಾಮದಲ್ಲಿನ ಬುದ್ಧನ ಮೂರ್ತಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಧ್ವಂಸ ಮಾಡಿದ ಘಟನೆ ಖಂಡಿಸಿ ಪಟ್ಟಣದ ತಾಲ್ಲೂಕು ಆಡಳಿತ ಭವನದ ಮುಂದೆ ಶುಕ್ರವಾರ ಆಳಂದ ಸೌಹಾರ್ದ ವೇದಿಕೆ ಹಾಗೂ ಬೌದ್ಧ ಹಿತೈಷಿಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ಧುತ್ತರಗಾಂವನ ಕೋರಣೇಶ್ವರ ಸ್ವಾಮೀಜಿ ಮಾತನಾಡಿ, ವಿಶ್ವಕ್ಕೆ ಶಾಂತಿ, ಅಹಿಂಸೆಯನ್ನು ಸಾರಿದ ಮಹಾತ್ಮ ಬುದ್ಧರ ಮೂರ್ತಿಯನ್ನು ಧ್ವಂಸ ಮಾಡಿದ ಘಟನೆ ಖಂಡನೀಯ. ಪುರಾತನ ಸ್ಮಾರಕ ಸಂರಕ್ಷಣೆ ಮಾಡಬೇಕಾದ ಅರಣ್ಯ ಇಲಾಖೆಯ ನಿರ್ಲಕ್ಷ್ಯವು ಸರಿಯಲ್ಲ. ನಜರಾಪುರದಲ್ಲಿ ಬುದ್ಧನ ಸ್ಮಾರಕ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಬೆಳಮಗಿಯ ಅಮರಜ್ಯೋತಿ ಭಂತೇಜಿ ಮಾತನಾಡಿ, ಬುದ್ಧ, ಬಸವಣ್ಣ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರು ಮಾನವತಾವಾದದ ಪ್ರತಿಪಾದ ಕರು. ಸಮಾಜದಲ್ಲಿ ಕಿಡಿಗೇಡಿಗಳ ದುಷ್ಕೃತ್ಯದಿಂದ ಸಾಮರಸ್ಯ ಹಾಳು ಮಾಡುವ ಶಕ್ತಿಗಳು ಹೆಚ್ಚುತ್ತಿರುವುದು ಅಪಾಯಕಾರಿ. ಇಲ್ಲಿ ಸರ್ಕಾರದ ಅರಣ್ಯ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವುದು ಖೇದಕರ. ತಕ್ಷಣ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಅಧ್ಯಕ್ಷ ರಮೇಶ ಲೋಹಾರ, ಹೋರಾಟಗಾರ ಮೌಲಾ ಮುಲ್ಲಾ, ಬಾಬುರಾವ ಅರುಣೋದಯ, ಮಲ್ಲಿ ನಾಥ ಯಲಶೆಟ್ಟಿ, ಕಲ್ಯಾಣಿ ತುಕಾಣೆ, ವಿಠಲ ಕೋಣೇಕರ್, ತುಕರಾಮ ಕೊಡಲಗ ಹಂಗರಗಾ, ಮಿಥುನ ಝಳಕಿ, ಸಿದ್ದಾರ್ಥ ಭೂಸನೂರು, ಮಹಾದೇವ ಜಿಡ್ಡೆ ಪಾಲ್ಗೊಂಡಿದ್ದರು.
ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ಅವರು ಮನವಿ ಸ್ವೀಕರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.