
ವಾಡಿ: ‘ಭಾರತ ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡುವುದರ ಮೂಲಕ ಹೊಸ ಭಾಷ್ಯ ಬರೆದ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರನ್ನು ಮರೆತರೆ ಯಾವುದೇ ಭವಿಷ್ಯವಿಲ್ಲ. ಅಂಬೇಡ್ಕರ್ ಎಂದೆಂದಿಗೂ ಶೋಷಿತರ ಬಾಳಿನ ಆಶಾಕಿರಣವಾಗಿಯೇ ಇರುತ್ತಾರೆ’ ಎಂದು ಮನೋವಿಜ್ಞಾನಿ ಡಾ.ದಿಲೀಪಕುಮಾರ ನವಲೆ ಹೇಳಿದರು.
ಬಾಬಾಸಾಹೇಬ್ ಡಾ.ಅಂಬೇಡ್ಕರ್ ಅವರ 69ನೇ ಮಹಾ ಪರಿನಿಬ್ಬಾಣ ದಿನದ ನಿಮಿತ್ತ ಬೌದ್ಧ ಸಮಾಜ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ತರುಣ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಹಾಗೂ ರಕ್ತದಾನ ಶಿಬಿರ ಉದ್ದೇಶಿಸಿ ಮಾತನಾಡಿದ.
‘ಸಂವಿಧಾನದ ಅತೀಹೆಚ್ಚು ಫಲಾನುಭವಿಗಳಾದ ಹಲವು ವರ್ಗಗಳು ಅಂಬೇಡ್ಕರ್ ಅವರನ್ನೇ ಮರೆತಿದ್ದರಿಂದ ದೇಶ ಅಧೋಗತಿಯತ್ತ ಸಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಒಬ್ಬ ಅಂಬೇಡ್ಕರ್ ಜನ್ಮ ತಾಳದಿದ್ದರೆ ಆಸಂಖ್ಯಾತ ಶೋಷಿತರ ಪರಿಸ್ಥಿತಿ ಏನಾಗಿರುತ್ತಿತ್ತು ಎಂದು ಊಹಿಸಲು ಸಾಧ್ಯವಿಲ್ಲ. ಸಮಾಜದ ಹಿಂದುಳಿದ ವರ್ಗದ ಯಾವುದೇ ವ್ಯಕ್ತಿ ಅಂಬೇಡ್ಕರ್ರನ್ನು ಸ್ಮರಿಸಲೇಬೇಕು. ಅಂಬೇಡ್ಕರ್ ಹಾಗೂ ಅವರ ವಿಚಾರಗಳನ್ನು ಮರೆತು ನಾವು ಏನಾಗುತ್ತಿದ್ದೇವೆ ಎಂದು ಅವರ 69ನೇ ಮಹಾ ಪರಿನಿಬ್ಬಾಣದ ಸಂದರ್ಭದಲ್ಲಿ ಆತ್ಮಾವಲೋಕನ ಮಾಡಬೇಕಿದೆ’ ಎಂದು ಹೇಳಿದರು.
ಶಿಕ್ಷಕರಾದ ಬಸವರಾಜ, ಅಣ್ಣಾರಾವ ಬಿಲಗುಂದಿ, ಬಸವರಾಜ ಕಾಟಮಳ್ಳಿ, ಸಂತೋಷ ಜೋಗೂರ, ಎಸಿಸಿ ಕಾರ್ಮಿಕ ಸಂಘದ ಅಧ್ಯಕ್ಷ ಶರಣಬಸ್ಸು ಸಿರೂರಕರ, ಚಂದ್ರಸೇನ ಮೇನಗಾರ ಮಾತನಾಡಿದರು. ಸ್ಥಳೀಯ ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಅಧ್ಯಕ್ಷತೆ ವಹಿಸಿದ್ದರು.
ಉಪ ತಹಶೀಲ್ದಾರ್ ಗೌತಮ ಗಾಯಕವಾಡ, ಶ್ರಾವಣಕುಮಾರ ಮೊಸಲಗಿ, ಖೇಮಲಿಂಗ ಬೆಳಮಗಿ, ದೇವಿಂದ್ರ ನಿಂಬರ್ಗಾ, ಗೊಲ್ಲಾಳಪ್ಪ ಬಡಿಗೇರ, ಮಲ್ಲೇಶಿ ಚುಕ್ಕೇರ, ಮಲ್ಲಿಕಾರ್ಜುನ ಕಟ್ಟಿ, ಬಶೀರ ಖುರೇಶಿ, ಸುರೇಶ ಬನಸೋಡೆ, ವಿಜಯ ಸಿಂಗೆ, ಸಂತೋಷ ಕೋಮಟೆ, ಶೇಖಪ್ಪ ಹೇರೂರ, ಆನಂದ ಕಟ್ಟಿ, ರಾಜು ಕೊಲ್ಲೂರ, ಕಿಶೋರ ಸಿಂಗೆ ಸೇರಿದಂತೆ ಮಾತೋಶ್ರೀ ರಮಾಬಾಯಿ ಅಂಬೇಡ್ಕರ ಹಾಗೂ ಅಮೃತಜ್ಞಾನ ಶಿಕ್ಷಣ ಸಂಸ್ಥೆಯ ನೂರಾರು ವಿದ್ಯಾರ್ಥಿಗಳು ಇದ್ದರು.
ಬೌದ್ಧ ಸಮಾಜದ ಸಹ ಕಾರ್ಯದರ್ಶಿ ಸೂರ್ಯಕಾಂತ ರದ್ದೇವಾಡಿ ಸ್ವಾಗತಿಸಿ, ನಿರೂಪಿಸಿದರು. ಕಲಬುರ್ಗಿಯ ಜೀವದಾರ ಮಾತೋಶ್ರೀ ರಕ್ತ ಕೇಂದ್ರದ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.