ADVERTISEMENT

ನುಸುಳುಕೋರರ ತಡೆಯದ ಅಮಿತ್ ಶಾ ಅಸಮರ್ಥ ಗೃಹಸಚಿವ: ಪ್ರಿಯಾಂಕ್ ಖರ್ಗೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 10:12 IST
Last Updated 10 ಜನವರಿ 2026, 10:12 IST
   

ಕಲಬುರಗಿ: ಬಿಜೆಪಿ ಆಡಳಿತದಲ್ಲಿರುವ ಅಸ್ಸಾಂ ಮತ್ತಿತರ ರಾಜ್ಯಗಳ ಗಡಿಯ ಮೂಲಕವೇ ಬಾಂಗ್ಲಾದೇಶಿಯರು ದೇಶಕ್ಕೆ ವಲಸೆ ಬರುತ್ತಿದ್ದಾರೆ. ವಲಸಿಗರನ್ನು ತಡೆಯುವ ಬದಲು ದೇಶದ ಚುನಾಯಿತ ಸರ್ಕಾರಗಳನ್ನು ಉರುಳಿಸುವ ಬಗ್ಗೆ ಯೋಚಿಸುವ ಅಮಿತ್ ಶಾ ದೇಶ ಕಂಡ ಅತ್ಯಂತ ಅಸಮರ್ಥ ಗೃಹಸಚಿವ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಭಾರತ–ಬಾಂಗ್ಲಾದೇಶದ ಅಂತರರಾಷ್ಟ್ರೀಯ ಗಡಿಯನ್ನು ಕಾಯಬೇಕಾದವರು ಸಿದ್ದರಾಮಯ್ಯ, ಜಿ. ಪರಮೇಶ್ವರ ಅವರೋ ಅಥವಾ ಕೇಂದ್ರ ಗೃಹಸಚಿವ ಅಮಿತ್ ಶಾ ಅವರೋ? ಮಾತಿಗೊಮ್ಮೆ ರಾಜ್ಯದಲ್ಲಿ ಬಾಂಗ್ಲಾದೇಶಿಯವರು ನುಸುಳಿದ್ದಾರೆ ಎಂದು ಬಿಜೆಪಿಯವರು ಆರೋಪಿಸುತ್ತಾರೆ. ಅದಕ್ಕೆ ಕಾರಣ ಅವರದೇ ಪಕ್ಷದ ಸರ್ಕಾರದ ಗೃಹಸಚಿವರು ಎಂಬುದು ಗೊತ್ತಿಲ್ಲವೇ?’ ಎಂದು ಪ್ರಶ್ನಿಸಿದರು.

ADVERTISEMENT

‘ಕೇಂದ್ರದಲ್ಲಿ ನಮ್ಮ ಸರ್ಕಾರ ಇದ್ದಾಗ ಒಂದು ಲಕ್ಷ ಬಾಂಗ್ಲಾದೇಶಿಯರನ್ನು ವಾಪಸ್ ಕಳುಹಿಸಲಾಗಿತ್ತು. ಕಳೆದ 11 ವರ್ಷಗಳಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿ ಅವರ ಎನ್‌ಡಿಎ ಸರ್ಕಾರ ಏಳು ಸಾವಿರ ಜನರನ್ನೂ ವಾಪಸ್ ಕಳುಹಿಸಿಲ್ಲ. ಈ ಬಗ್ಗೆ ಕಠಿಣ ನಿಲುವು ತೆಗೆದುಕೊಳ್ಳಬೇಕಾಗಿದ್ದ ಅಮಿತ್ ಶಾ ಅವರು ತಮ್ಮ ಸಾಂವಿಧಾನಿಕ ಕರ್ತವ್ಯ ನಿರ್ವಹಿಸುವುದನ್ನು ಬಿಟ್ಟು ಇಡಿ, ಸಿಬಿಐಗಳನ್ನು ಬಳಸಿಕೊಂಡು ತಮ್ಮ ವಿರೋಧಿ ಸರ್ಕಾರಗಳನ್ನು ಬುಡಮೇಲು ಮಾಡುವಲ್ಲಿ ನಿರತರಾಗಿದ್ದಾರೆ’ ಎಂದು ಟೀಕಿಸಿದರು.

ವಿಬಿ ರಾಮ್ ಜಿ ನಾಥೂರಾಮ ಕಾಯ್ದೆ

‘ದಿನ ನಿತ್ಯ 12 ಕೋಟಿ ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುತ್ತಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಕೇಂದ್ರ ಸರ್ಕಾರವು ವಿಬಿ ರಾಮ್ ಜಿ ಕಾಯ್ದೆ ಹೆಸರಿನಲ್ಲಿ ವಿರೂಪಗೊಳಿಸಿದೆ. ಈ ಕಾಯ್ದೆ ಸೀತಾರಾಮ, ದಶರಥ ರಾಮರ ಕಾಯ್ದೆಯಲ್ಲ. ಬದಲಾಗಿ ನಾಥೂರಾಮನ ಕಾಯ್ದೆಯಾಗಿದೆ’ ಎಂದು ಹರಿಹಾಯ್ದರು.

‘ಈ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಹೇಳಿಕೆ ನೀಡಿದ್ದಾರೆ. ಈ ಕಾಯ್ದೆಯನ್ನು ಪ್ರಶ್ನಿಸಿ ಕಾನೂನು ಹೋರಾಟವನ್ನೂ ನಡೆಸಲಿದ್ದೇವೆ’ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಮನರೇಗಾ ಕಾಯ್ದೆಯಲ್ಲಿ ಅಕ್ರಮ ನಡೆಯುತ್ತಿದೆ ಎಂಬುದಾದರೆ ಕಳೆದ 11 ವರ್ಷಗಳಿಂದ ತಾವೇ ಅಧಿಕಾರದಲ್ಲಿದ್ದರೂ ತಡೆಯಲು ಏಕೆ ಸಾಧ್ಯವಾಗಿಲ್ಲ. ಶೀತ ಬಂದಿದೆಯಂದು ಮೂಗನ್ನೇ ಕೊಯ್ಯುವುದು ಸರಿಯೇ? ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆಯಲ್ಲಿ ₹ 14,500 ಕೋಟಿ ಅವ್ಯವಹಾರ ನಡೆದಿದೆ ಎಂದು ಸಿಎಜಿ ವರದಿ ಹೇಳುತ್ತಿದೆ. ಹಾಗಾದರೆ, ಆ ಯೋಜನೆಯನ್ನು ನಿಲ್ಲಿಸುತ್ತಾರಾ’ ಎಂದು ಪ್ರಶ್ನಿಸಿದರು.

‘ಬಿಜೆಪಿಯವರು ಎಂದಿಗೂ ಬಡವರ ಪರವಾಗಿಲ್ಲ. ಹಾಗಾಗಿಯೇ, ನರೇಗಾ ಯೋಜನೆಯ ಆಶಯಗಳನ್ನು ಮಣ್ಣುಪಾಲು ಮಾಡುತ್ತಿದ್ದಾರೆ’ ಎಂದು ಪ್ರಿಯಾಂಕ್ ಖರ್ಗೆ ಹರಿಹಾಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.