ಕಲಬುರ್ಗಿ: ಇಲ್ಲಿಯ ಅಮೃತಸರೋವರ ಪರಿಸರ ಸ್ನೇಹಿ ತಾಣವಾಗಿದ್ದು, ಮೌಂಟ್ ಅಬು ಕ್ಷೇತ್ರವೇ ಇಲ್ಲಿ ತಲೆ ಎತ್ತಿದಂತೆ ಅನುಭವವಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಹೇಳಿದರು.
ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆಯ ಸಂಸ್ಥಾಪಕ ಬ್ರಹ್ಮಬಾಬಾ ಅವರ 52ನೇ ಸ್ಮೃತಿ ದಿನದ ಅಂಗವಾಗಿ ಸೋಮವಾರ ಸಂಜೆ ಇಲ್ಲಿಯ ಸೇಡಂ ರಸ್ತೆಯ ಅಮೃತ ಸರೋವರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅಮೃತಸರೋವರ ಪರಿಸರದಲ್ಲಿ ಬರುತ್ತಿದ್ದಂತೆ ಮನಸ್ಸಿಗೆ ಶಾಂತಿ ಲಭಿಸಿದ ಅನುಭೂತಿಯಾಗುತ್ತದೆ.ಇಲ್ಲಿಯ ಸಹೋದರ–ಸಹೋದರಿಯರ ನಿಸ್ವಾರ್ಥ ಸೇವೆಯಿಂದಾಗಿ ಕಲಬುರ್ಗಿ ಅಷ್ಟೇ ಅಲ್ಲದೆ ಸುತ್ತಲಿನ ಪ್ರದೇಶಗಳ ಜನರಿಗೆ ಇದು ಪ್ರಮುಖ ಆಕರ್ಷಣೀಯ ಸ್ಥಳವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಲ್ಲಿ ಹೊಸದಾಗಿ ಆರಂಭಿಸಿರುವ ಧ್ವನಿ–ಬೆಳಕಿನ ಶೋ ಬಹಳ ಸುಂದರವಾಗಿದ್ದು, ಅಧ್ಯಾತ್ಮದ ಜ್ಞಾನ ನೀಡುತ್ತದೆ. ಬ್ರಹ್ಮಬಾಬಾ ಅವರ ಸೃತಿದಿವಸದ ಅಂಗವಾಗಿ ನಿರ್ಮಿಸಿದ ಶಾಂತಿ ಸ್ಥಂಬ ಎಲ್ಲರಿಗೂ ಆತ್ಮದ ಅಮರತ್ವದ ಅನುಭವ ಮಾಡುತ್ತಿದೆ. ಹೆಚ್ಚು ಹೆಚ್ಚು ಜನರು ಇದರ ಪ್ರಯೋಜನ ಪಡೆಯಬೇಕು ಎಂದರು.
ಕಲಬುರ್ಗಿ ಉಪವಲಯ ರಾಜಯೋಗ ಕೇಂದ್ರಗಳ ಮುಖ್ಯಸ್ಥೆಬಿ.ಕೆ. ವಿಜಯಾದೀದಿ ಅವರು, ‘ಸಾತ್ವಿಕ ವ್ಯಕ್ತಿತ್ವದ ಶಾಸಕ ದತ್ತಾತ್ರೇಯ ಅವರಿಗೆ ಇನ್ನಷ್ಟು ಉನ್ನತ ಹುದ್ದೆ ಲಭಿಸಿ, ಈ ಭಾಗದ ಜನರಿಗೆ ಹೆಚ್ಚಿನ ಸೇವೆ ಸಲ್ಲಿಸುವಂತಾಗಲಿದೆ’ ಎಂದರು.
ಬ್ರಹ್ಮಕುಮಾರಿ ಸಂಸ್ಥೆಯ ಸಮಾಜಸೇವಾ ಪ್ರಭಾಗದ ರಾಷ್ಟ್ರೀಯ ಸಂಯೋಜಕ ರಾಜಯೋಗಿ ಬಿ.ಕೆ. ಪ್ರೇಮಣ್ಣ ಅವರು, ‘ವ್ಯಕ್ತಿಯ ಗುಣ ಸ್ವಭಾವವೇ ಅವರನ್ನು ಉನ್ನತ ಮಟ್ಟಕ್ಕೇರಿಸುತ್ತದೆ. ಇಂದಿನ ಸ್ಪರ್ಧಾತ್ಮಕ ಸಮಾಜದಲ್ಲಿ ವಿನಯಶೀಲರಾಗಿ ಸೇವೆ ಮಾಡುತ್ತಿರುವ ದತ್ತಾತ್ರೇಯ ಪಾಟೀಲರುಮಾದರಿಯ ವ್ಯಕ್ತಿಯಾಗಿದ್ದಾರೆ’ ಎಂದು ಶ್ಲಾಘಿಸಿದರು.
ಬಿಜೆಪಿ ಯುವ ಮೋರ್ಚಾ ನಗರ ಘಟಕದ ಕಾರ್ಯದರ್ಶಿ ಉದಯಕುಮಾರ ರೇಷ್ಮೆ, ಬಿ.ಕೆ ಶರಣಬಸವ ಹೀರಾ, ಆದರ್ಶನಗರ ಕೇಂದ್ರದ ಪ್ರಭಾರಿ ಬಿ.ಕೆ. ದಾನೇಶ್ವರಿ, ಅಮೃತಸರೋವರ ರಿಟ್ರೀಟ್ ಸೆಂಟರ್ನ ಪ್ರಭಾರಿ ಬಿ.ಕೆ. ಶಿವಲೀಲಾ ಉಪಸ್ಥಿತರಿದ್ದರು ಎಂದು ಬಿ.ಕೆ ಸವಿತಾ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.