
ಕಲಬುರಗಿ: ಮುಂಬೈನಲ್ಲಿ ಈಚೆಗೆ ನಡೆದ 10ನೇ ರಾಷ್ಟ್ರೀಯ ಸಮುದಾಯ ರೇಡಿಯೊ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕಲಬುರಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ನಡೆಸುತ್ತಿರುವ ಸಮುದಾಯ ರೇಡಿಯೊ ಕೇಂದ್ರ (ಸಿಆರ್ಎಸ್) ರೇಡಿಯೊ ಅಂತರವಾಣಿಗೆ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್.ಮುರುಗನ್ ಅವರು ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿದರು.
ಅಂತರವಾಣಿಯು ತೃತೀಯ ಸ್ಥಾನ ಪಡೆದಿದ್ದು, ಪ್ರಶಸ್ತಿಯು ₹ 50 ಸಾವಿರ ನಗದು ಬಹುಮಾನ, ಪದಕ ಮತ್ತು ಪ್ರಶಂಸಾ ಪತ್ರವನ್ನು ಒಳಗೊಂಡಿದೆ. ‘ಸುಸ್ಥಿರತಾ ಮಾದರಿ’ ವಿಭಾಗದಲ್ಲಿ ಇಡೀ ಕರ್ನಾಟಕದಿಂದ ಪ್ರಶಸ್ತಿಗೆ ಆಯ್ಕೆಯಾದ ಏಕೈಕ ಸಮುದಾಯ ರೇಡಿಯೊ ಕೇಂದ್ರವಾಗಿದೆ. ಈ ಪ್ರಶಸ್ತಿಯ ಮತ್ತೊಂದು ವೈಶಿಷ್ಟ್ಯವೆಂದರೆ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ ದೇಶದ ವಿವಿಧ ಭಾಗಗಳಿಂದ 530ಕ್ಕೂ ಹೆಚ್ಚು ಸಮುದಾಯ ರೇಡಿಯೊ ಕೇಂದ್ರಗಳಿಂದ ಏರ್ಪಟ್ಟ ತೀವ್ರ ಸ್ಪರ್ಧೆಯಲ್ಲಿ ಅಂತರವಾಣಿ ಮೂರನೇ ಸ್ಥಾನ ಪಡೆದು ಕೀರ್ತಿ ತಂದಿದೆ.
ರೇಡಿಯೊ ಅಂತರವಾಣಿಯ ನಿರ್ದೇಶಕರೂ ಆಗಿರುವ ಕನ್ನಡ ಪ್ರಾಧ್ಯಾಪಕ ಶಿವರಾಜ ಶಾಸ್ತ್ರಿ ಹೇರೂರ ಅವರು ಸಚಿವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು. ‘ವಿಷಯ ರಚನೆ, ಬ್ಯಾಂಕಿಂಗ್ ಕಾರ್ಯಕ್ರಮ, ರೇಡಿಯೊ ಅಂತರವಾಣಿ ನಿರ್ಮಿಸಿ ಪ್ರಸಾರ ಮಾಡುವ ಕಾರ್ಯಕ್ರಮಗಳಲ್ಲಿ ಸಮುದಾಯದ ಭಾಗವಹಿಸುವಿಕೆ, ಉತ್ತಮ ಆರ್ಥಿಕ ಸುಸ್ಥಿರತೆ ಮತ್ತು ತಾಂತ್ರಿಕವು ರಾಷ್ಟ್ರೀಯ ಮನ್ನಣೆ ಗಳಿಸಲು ಪ್ರಮುಖ ಮಾನದಂಡವಾಗಿದ್ದವು’ ಎಂದು ಶಿವರಾಜ ಶಾಸ್ತ್ರಿ ತಿಳಿಸಿದರು.
‘ಅಂತರವಾಣಿಯ ಸಿಸ್ಟಂ ಸ್ಟೋರೇಜ್ನಲ್ಲಿ ಇದುವರೆಗೆ ದಾಖಲೆಯ 36 ಸಾವಿರ ಗಂಟೆಗಳ ಕಾರ್ಯಕ್ರಮದೊಂದಿಗೆ, ಪ್ರತಿದಿನ 10 ಗಂಟೆಗಳ ಕಾಲ 100ಕ್ಕೂ ಹೆಚ್ಚು ಹಳ್ಳಿಗಳ ಕೇಳುಗರಿಗೆ ಪ್ರಸಾರ ಮಾಡುತ್ತಲಿದೆ. 30 ಕಿ.ಮೀ ತಂರಂಗಾಂತರ ವ್ಯಾಪ್ತಿಯನ್ನು ಒಳಗೊಂಡಿದೆ’ ಎಂದರು.
ಶಿವರಾಜ ಶಾಸ್ತ್ರಿ ಹೇರೂರ ಅವರು ಅಂತರವಾಣಿಗೆ ನೀಡಿದ ಪ್ರಶಸ್ತಿಯನ್ನು ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ಪರ್ಸನ್ ದಾಕ್ಷಾಯಣಿ ಎಸ್.ಅಪ್ಪ, ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಹಾಗೂ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರಿಗೆ ನೀಡಿ ಆಶೀರ್ವಾದ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.