ADVERTISEMENT

ನಿರುಪಯುಕ್ತ ವಸ್ತುಗಳಿಂದ ಅರಳಿದ ಕಲೆ

ಮಹೇಶ ಕಡೇಚೂರ ಅವರ ಮನೆ ಅಲಂಕರಿಸಿದ ಕಲಾಕೃತಿಗಳು

ಹನಮಂತ ಕೊಪ್ಪದ
Published 1 ಆಗಸ್ಟ್ 2021, 2:07 IST
Last Updated 1 ಆಗಸ್ಟ್ 2021, 2:07 IST
ಕಲಾಕೃತಿಯೊಂದಿಗೆ ಮಹೇಶ ಕಡೇಚೂರ
ಕಲಾಕೃತಿಯೊಂದಿಗೆ ಮಹೇಶ ಕಡೇಚೂರ   

ಕಲಬುರ್ಗಿ: ನಗರ ಪ್ರದೇಶಗಳಲ್ಲಿ ತ್ಯಾಜ್ಯ ನಿರ್ವಹಣೆ ಬಹುದೊಡ್ಡ ಸಮಸ್ಯೆ. ಎಲ್ಲೆಂದರಲ್ಲಿ ಹರಡುವ ಕಸದಿಂದ ನಗರದ ಅಂದಕ್ಕೂ ಧಕ್ಕೆ. ಇಲ್ಲಿನ ಜಗತ್ ಬಡಾವಣೆಯಲ್ಲಿರುವ ಉದ್ಯಮಿ ಮಹೇಶ ಕಡೇಚೂರ ಅವರು ನಿರುಪಯುಕ್ತ ವಸ್ತುಗಳಿಂದ ಕಲಾಕೃತಿ ತಯಾರಿಸುವ ಮೂಲಕ ತ್ಯಾಜ್ಯ ನಿರ್ವಹಣೆ ಹೇಗೆ ಮಾಡಬಹುದೆಂಬುದನ್ನು ತೋರಿಸಿಕೊಟ್ಟಿದ್ದಾರೆ.

ನಾವು ನಿರುಪಯುಕ್ತ ಎಂದು ಬೀಸಾಡುವ ವಸ್ತುಗಳೆ‌ಲ್ಲ ಮಹೇಶ ಅವರ ಕೈಯಲ್ಲಿ ಕಲಾಕೃತಿಗಳಾಗಿ ಜೀವ ಪಡೆದು, ಅವರ ಮನೆಯನ್ನು ಅಲಂಕರಿಸಿವೆ. ವ್ಯರ್ಥವಾದ ಸಾಮಗ್ರಿಗಳನ್ನೇ ಬಳಸಿಕೊಂಡು 200ಕ್ಕೂ ಹೆಚ್ಚು ದಿನಬಳಕೆ ವಸ್ತುಗಳನ್ನು ತಯಾರಿಸಿದ್ದಾರೆ.

ಲಾಕ್‌ಡೌನ್ ಸಂದರ್ಭದಲ್ಲಿ ಉದ್ಯಮ ಸ್ಥಗಿತಗೊಂಡಾಗ ಅವರಿಗೆ ‘ಕಸದಿಂದ ರಸ’ ತೆಗೆಯುವ ಉಪಾಯ ಹೊಳೆಯಿತು. ಮನೆಯಲ್ಲಿದ್ದ ಹಲವಾರು ನಿರುಪಯುಕ್ತ ವಸ್ತುಗಳನ್ನು ಸಂಗ್ರಹಿಸಿ, ಕಲೆಯ ಮೂಲಕ ಅವುಗಳನ್ನು ಉಪಯುಕ್ತ ವಸ್ತುಗಳನ್ನಾಗಿ ಮಾಡಿದರು.

ADVERTISEMENT

ಬಾಟಲಿ, ತೆಂಗಿನ ಚಿಪ್ಪು, ಕಪ್ಪೆ ಚಿಪ್ಪು, ಪ್ಲಾಸ್ಟಿಕ್ ಸಾಮಗ್ರಿ, ಹಾಳೆ, ಥರ್ಮೋಕೊಲ್, ಗೋಣಿಚೀಲ, ಬೆಂಕಿ ಪೊಟ್ಟಣ, ಪಿವಿಸಿ ಪೈಪ್, ಗಾಜು, ಪ್ಲಾಸ್ಟಿಕ್ ವೈರ್, ದಾರ, ಡಬ್ಬಿ,ಬಂಬೂ, ಹುಲ್ಲು,ಮರಳು, ಪ್ಲಾಸ್ಟರ್ ಆಫ್ ಪ್ಯಾರಿಸ್,ಪೊರಕೆ ಕಡ್ಡಿ ಸೇರಿದಂತೆ ಮುಂತಾದ ವಸ್ತುಗಳಿಂದ ಅವರು ತಯಾರಿಸಿರುವ ಕಲಾಕೃತಿಗಳು ಚಿತ್ತಾಕರ್ಷಕವಾಗಿವೆ.

ಬಕೇಟ್, ಹೂಜಿ, ಬುಟ್ಟಿ, ಡಬ್ಬಿ, ಮಡಕೆಗಳನ್ನು ‘ಪಾಟ್‌’ಗಳನ್ನಾಗಿ ಮಾಡಿ, ಮನೆಯ ಮುಂದೆ ಹಲವಾರು ಅಲಂಕಾರಿಕ ಸಸ್ಯಗಳನ್ನು ಬೆಳೆಸುತ್ತಿದ್ದಾರೆ. ಜತೆಗೆ ಪಕ್ಷಿಗಳಿಗೆ ನೀರುಣಿಸಲು ಅರವಟಿಕೆಗಳನ್ನಾಗಿ ಮಾಡಿದ್ದಾರೆ.

ಹಳೆಯ ಬಾಟಲಿಗಳನ್ನು ಬಿಸಾಡದೆ ಅವುಗಳ ಮೇಲೆ ವರ್ಣರಂಜಿತ ಕಾಗದ, ಕಪ್ಪೆ ಚಿಪ್ಪು ಅಂಟಿಸಿ, ಬಣ್ಣ ಬಳಿದು ಸುಂದರ ಕಲಾಕೃತಿಗಳನ್ನಾಗಿ ಮಾಡಿದ್ದಾರೆ. ಅವರ ಕಲಾಕೃತಿಗಳಲ್ಲಿ ಚೆಂಡು, ಕಟ್ಟಿಗೆಗಳಿಂದ ಮಾಡಿದ ಅಲಂಕಾರಿಕ ದೀಪ ಹಾಗೂ ನೀರಿನ ಕಾರಂಜಿ ನೋಡುಗರ ಗಮನ ಸೆಳೆಯುತ್ತವೆ.ಈಚೆಗೆ ಅವರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಟೌನ್‌ಹಾಲ್‌ನಲ್ಲಿ ವಸ್ತುಪ್ರದರ್ಶನವನ್ನೂ ಆಯೋಜಿಸಿದ್ದರು.

*ಮನೆಯಲ್ಲಿ ವಸ್ತುಗಳನ್ನು ಬಳಸಿ ಬಿಸಾಡುತ್ತೇವೆ. ಬದಲಿಗೆ ಅವುಗಳನ್ನು ಸುಂದರ ಕಲಾಕೃತಿಗಳಾಗಿ ರೂಪಿಸಿ ಮರುಬಳಕೆ ಮಾಡುವುದರಿಂದ ಮಾಲಿನ್ಯ ತಡೆಗಟ್ಟಬಹುದು. ಇದೊಂದು ಕಡಿಮೆ ಖರ್ಚಿನ ಕಲೆಯಾಗಿದೆ
- ಮಹೇಶ ಕಡೇಚೂರ, ಉದ್ಯಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.