ADVERTISEMENT

‘ಆಶಾ’ ಕುಟುಂಬಕ್ಕೆ ಪರಿಹಾರ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಮೇ 2021, 3:03 IST
Last Updated 25 ಮೇ 2021, 3:03 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಐಯುಟಿಯುಸಿ ಸಂಘಟನೆ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಆನ್‌ಲೈನ್ ಚಳುವಳಿ ನಡೆಸಿದರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಐಯುಟಿಯುಸಿ ಸಂಘಟನೆ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಆನ್‌ಲೈನ್ ಚಳುವಳಿ ನಡೆಸಿದರು   

ವಾಡಿ: ಕೋವಿಡ್‌ನಿಂದ ಮೃತಪಟ್ಟ ಆಶಾ ಕಾರ್ಯಕರ್ತೆಯರ ಕುಟುಂಬಗಳಿಗೆ ಕೇಂದ್ರ ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ಎಐಯುಟಿಯುಸಿ ಸಂಘಟನೆಯ ಜಿಲ್ಲಾ ಜಂಟಿ ಕಾರ್ಯದರ್ಶಿ ಶರಣು ಹೆರೂರು ಒತ್ತಾಯಿಸಿದರು.

ಆಶಾ ಕಾರ್ಯಕರ್ತೆಯರ ರಾಜ್ಯ ಮಟ್ಟದ ಆನ್‌ಲೈನ್ ಚಳುವಳಿ ಉದ್ದೇಶಿಸಿ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರು ಹಲವು ತಿಂಗಳುಗಳಿಂದ ವೇತನವಿಲ್ಲದೇ ದುಡಿಯುತ್ತಿದ್ದಾರೆ.ಸುರಕ್ಷಾ ಸಾಮಗ್ರಿಗಳ ಕೊರತೆಯ ನಡುವೆಯೂ ಅವರು ಸೋಂಕು ನಿಯಂತ್ರಣಕ್ಕಾಗಿ ಶ್ರಮಿಸುತ್ತಿದ್ದಾರೆ .ಅವರಿಗೆ ಕನಿಷ್ಠ ಜೀವನ ಭದ್ರತೆ ಕಲ್ಪಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲವಾಗಿವೆ ಎಂದು ಕಿಡಿಕಾರಿದರು.

ಆಶಾ ಕಾರ್ಯಕರ್ತೆಯರ ಸಂಘದ ಚಿತ್ತಾಪುರ ತಾಲ್ಲೂಕು ಘಟಕದ ಅಧ್ಯಕ್ಷೆ ನಾಗಮ್ಮ ಕೊಲ್ಲೂರು ಮಾತನಾಡಿ, ಪ್ರತಿ ಜಿಲ್ಲೆಯಲ್ಲಿ 20 ರಿಂದ 40 ಆಶಾ ಕಾರ್ಯಕರ್ತೆಯರು ಸೋಂಕಿ ಗೋಳಗಾಗಿರುವ ಕಾರಣ ಅವರನ್ನು ಅವರ ಕುಟುಂಬವನ್ನು ಸಶಕ್ತಗೊಳಿಸಲು ಪ್ರತಿ ಕಾರ್ಯಕರ್ತೆಯರಿಗೆ ₹25 ಸಾವಿರ ಪರಿಹಾರ ನೀಡಬೇಕು ಎಂದರು.

ADVERTISEMENT

ಆಶಾ ಕಾರ್ಯಕರ್ತೆಯರಾದ ವಿಜುಬಾಯಿ ರಾಠೋಡ. ದೆವಮ್ಮ ವಡ್ನಳ್ಳಿ. ಸಾವಿತ್ರಿ ಬಟಗೇರಾ. ಮಲ್ಲಮ್ಮ ಪಾಟೀಲ. ಜ್ಯೋತಿ ಶಾಂಪೂರಹಳ್ಳಿ. ಶಿವಲೀಲಾ ಹಡಪದ. ಸಂತೋಶಿ ರಾವೂರ. ಜಯಶ್ರೀ ಸಿಂಧೆ. ಮಾಣಿಕಮ್ಮ, ರತ್ನಮ್ಮ ಕಟ್ಟಿಮನಿ. ಅನಿತಾ ವಾಡೆಕರ. ತಿಪ್ಪಮ್ಮಾ, ಅರುಣಾ, ಮಲ್ಲಮ್ಮ, ಕವಿತಾ ಕೋರವಾರ, ರೇಣುಕಾ ದಂಡೊತ್ತಿ. ಆಶಾ‌ ರಾಠೋಡ ಭಾಗವಹಿಸಿದ್ದರು.

‘ಗೌರವಧನ ಬಿಡುಗಡೆ ಮಾಡಿ’

ಶಹಾಬಾದ್: ರಾಜ್ಯ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ 3 ತಿಂಗಳುಗಳಿಂದ ಗೌರವಧನ ನೀಡಿಲ್ಲ. ಕೂಡಲೇ ಬಾಕಿ ಗೌರವಧನ ಬಿಡುಗಡೆ ಮಾಡಬೇಕು ಗೋಳಾ (ಕೆ) ಗ್ರಾಮದ ಆಶಾ ಕಾರ್ಯಕರ್ತೆಯರು ಒತ್ತಾಯಿಸಿದ್ದಾರೆ.

ಗೌರವಧನ ನಂಬಿಕೊಂಡು ಬದುಕು ನಡೆಸುತ್ತಿರುವ ನಮಗೆ ಈಗ ಸಂಕಷ್ಟ ಎದುರಾಗಿದೆ. ಕೊರೊನಾ ಮೊದಲನೇ ಅಲೆಯಲ್ಲಿ ಜೀವ ಪಣಕ್ಕಿಟ್ಟು ದುಡಿದ ನಮಗೆ ವಿಶೇಷ ಪ್ರೋತ್ಸಾಹ ಧನ ನೀಡಿಲ್ಲ. ಕೋವಿಡ್‌ನಿಂದ ಹಲವು ಆಶಾ ಕಾರ್ಯಕರ್ತೆಯರು ಸಾವನ್ನಪ್ಪಿದ್ದಾರೆ. ಆದರೂ ರಾಜ್ಯ ಸರ್ಕಾರ ತಿಂಗಳ ಗೌರವಧನ ನೀಡದೆ ನಮ್ಮ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೊನಾ ಸೇನಾನಿಗಳು ಎಂದು ಬಾಯಿಮಾತಿನಲ್ಲಿ ಹೇಳಿದರೆ ಸಾಲದು. ಸಕಾಲಕ್ಕೆ ಗೌರವಧನ ಕಲ್ಪಿಸುವ ವ್ಯವಸ್ಥೆ ಮಾಡಬೇಕು. ಸುರಕ್ಷಾ ಸಾಮಗ್ರಿ ಹಾಗೂ ವಿಶೇಷ ಪ್ರೋತ್ಸಾಹಧನ ನೀಡಬೇಕು ಎಂದು ಅವರು ಆಗ್ರಹಿಸಿದರು.

ಆಶಾ ಕಾರ್ಯಕರ್ತೆಯರಾದ ಗಂಗಮ್ಮ, ಶಕುಂತಲಾ,ದ್ರೌಪದಿ, ಸಂತೋಷಿ, ಜಲ್ಲಮ್ಮ, ಶಾಂತಾಬಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.