ADVERTISEMENT

ಸಿ.ಎನ್‌.ಮಂಜುನಾಥಗೆ ಚಿನ್ನದ ಕಂತಿ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 12 ಜನವರಿ 2020, 13:48 IST
Last Updated 12 ಜನವರಿ 2020, 13:48 IST
ರೇವಣಸಿದ್ದ ಶಿವಾಚಾರ್ಯರು
ರೇವಣಸಿದ್ದ ಶಿವಾಚಾರ್ಯರು   

ಕಲಬುರ್ಗಿ: ಹಿರಿಯ ಹೃದ್ರೋಗ ತಜ್ಞ ಹಾಗೂ ಬೆಂಗಳೂರಿನ ಜಯದೇವ ಆಸ್ಪತ್ರೆ ಅಧ್ಯಕ್ಷ ಡಾ.ಸಿ.ಎನ್‌.ಮಂಜುನಾಥ್‌ ಅವರಿಗೆ ತಾಲ್ಲೂಕಿನ ಶ್ರೀನಿವಾಸ ಸರಡಗಿಯ ಚಿಕ್ಕವೀರೇಶ್ವರ ಸಂಸ್ಥಾನಮಠದಿಂದ ನೀಡಲಾಗುವ ಚಿನ್ನದ ಕಂತಿ‍ಪ್ರಶಸ್ತಿಯನ್ನು ಇದೇ 17ರಂದು ಪ್ರದಾನ ಮಾಡಲಾಗುತ್ತದೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥಾನಮಠದ ಪೀಠಾಧಿಪತಿ ಡಾ.ರೇವಣಸಿದ್ಧ ಶಿವಾಚಾರ್ಯರು,’ಮಂಜುನಾಥ್‌ ಅವರು ಈಗಾಗಲೇ ಸುಮಾರು 80 ಸಾವಿರಕ್ಕೂ ಅಧಿಕ ಹೃದಯ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಿ ಸಾಧನೆ ಮಾಡಿದ್ದಾರೆ. ಬೆಂಗಳೂರಿನಂತಹ ದುಬಾರಿ ನಗರದಲ್ಲಿ ಬಡವರ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆಯನ್ನು ಜಯದೇವ ಸಂಸ್ಥೆಯ ಮೂಲಕ ಸಲ್ಲಿಸುತ್ತಿದ್ದಾರೆ. ಕಲಬುರ್ಗಿಯಲ್ಲಿಯೂ ಜಯದೇವ ಹೃದ್ರೋಗ ಸಂಸ್ಥೆಯನ್ನು ಆರಂಭಿಸುವ ಮೂಲಕ ಈ ಭಾಗದ ಜನಗಳು ಚಿಕಿತ್ಸೆಗಾಗಿ ಸೊಲ್ಲಾಪುರ, ಪುಣೆ, ಹೈದರಾಬಾದ್‌ಗೆ ಹೋಗುವುದನ್ನು ತಪ್ಪಿಸಿದ್ದಾರೆ. ಹೀಗಾಗಿ, ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ’ ಎಂದರು.

ಚಿಕ್ಕವೀರೇಶ್ವರ ಶಿವಾಚಾರ್ಯರ 73ನೇ ಪುಣ್ಮಸ್ಮರಣೋತ್ಸವದ ಅಂಗವಾಗಿ ನಡೆಯುವ ಧರ್ಮ ಚಿಂತನಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಉದ್ಘಾಟಿಸುವರು. ಶಾಸಕ ಬಸವರಾಜ ಮತ್ತಿಮೂಡ ಅಧ್ಯಕ್ಷತೆ ವಹಿಸುವರು. ಮುತ್ತ್ಯಾನ ಬಬಲಾದ ಗುರುಪಾದಲಿಂಗ ಸ್ವಾಮೀಜಿ, ಮಮದಾಪುರದ ಅಭಿನವ ಮುರುಘೇಂದ್ರ ಸ್ವಾಮೀಜಿ, ಆಲಮೇಲದ ಚಂದ್ರಶೇಕರ ಶಿವಾಚಾರ್ಯರು ಸಮ್ಮುಖ ವಹಿಸುವರು ಎಂದು ಹೇಳಿದರು.

ADVERTISEMENT

ಬ್ರಾಹ್ಮಿ ಮುಹೂರ್ತದಲ್ಲಿ ಕರ್ತೃ ಮಹಾ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಗಂಗಾಪೂಜೆ, ಯಾಗಶಾಲೆ ಪ್ರವೇಶ, ಗಣಪತಿ ಪೂಜೆ, ದುರ್ಗಾ ಹೋಮ, ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷೆ ನೆರವೇರಲಿದೆ ಎಂದರು.

ಸ್ವಾಗತ ಸಮಿತಿ ಅಧ್ಯಕ್ಷ ಶಿವಾನಂದ ಸಾಹುಕಾರ ಉಪ್ಪಿನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.