ಕಲಬುರ್ಗಿ: ಮಕ್ಕಳ ಮೇಲೆ ಅತಿಯಾದ ಆಸೆ ಇಟ್ಟು ಬೆಳೆಸುತ್ತಿರುವುದರಿಂದ ಮಕ್ಕಳು ತಮ್ಮ ಮನೆಯಿಂದ ದೂರವಾಗುತ್ತಿದ್ದಾರೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾಯಾಧೀಶ ಎಸ್.ಆರ್. ಮಾಣಿಕ್ಯ ಅಭಿಪ್ರಾಯಪಟ್ಟರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬಚಪನ್ ಬಚಾವೊ ಆಂದೋಲನ, ಮಾರ್ಗದರ್ಶಿ ಸಂಸ್ಥೆ ಹಾಗೂ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಗ್ರಾಮೀಣ ಕಲಬುರ್ಗಿ ಚೈಲ್ಡ್ ಲೈನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಎಸ್.ಎಸ್. ಕಾನೂನು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದ ಪ್ರತಿಯೊಬ್ಬ ಪ್ರಜೆಯೂ ಕಾನೂನಿನ ಸಲಹೆಗಳನ್ನು ಪಡೆಯಬೇಕು. ಹುಟ್ಟಿದಾಗಿನಿಂದ ಮರಣದವರೆಗೂ ಕಾನೂನು ನಮ್ಮನ್ನು ಹಿಂಬಾಲಿಸುತ್ತದೆ. ಪ್ರತಿಯೊಂದು ಮದುವೆಯನ್ನೂ ನೋಂದಣಿ ಮಾಡಿಸಬೇಕು. ಇದರಿಂದ ವಿಚ್ಛೇದನ ಅಥವಾ ಕೌಟುಂಬಿಕ ಸಂಘರ್ಷದ ಸಮಯದಲ್ಲಿ ಕಾನೂನಾತ್ಮಕ ಸಹಾಯ ಪಡೆಯಲು ಸಹಾಯವಾಗುತ್ತದೆ ಎಂದರು.
ಚೈಲ್ಡ್ ಲೈನ್ ನೋಡಲ್ ಕೇಂದ್ರದ ನಿರ್ದೇಶಕಿ ರೇಣುಕಾ ಗುಬ್ಬೇವಾಡಿ ಅವರು ಮಕ್ಕಳು ಮತ್ತು ಮಹಿಳೆಯರಿಗಾಗಿ ಇರುವಂತಹ ಸರ್ಕಾರಿ ಯೋಜನೆಗಳು ಮತ್ತು ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ ವಹಿಸಿದ್ದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಸಲಹೆಗಾರ ಭರತೇಶ ಶೀಲವಂತರ, ಮಹಿಳಾ ಕಲ್ಯಾಣಾಧಿಕಾರಿ ಉಮಾ ಪೂಜಾರಿ ಕಾರ್ಯಕ್ರಮದಲ್ಲಿದ್ದರು.
ನೋಡಲ್ ಅಧಿಕಾರಿ ಬಸವರಾಜ ಟೆಂಗಳಿ, ಶಿವಕುಮಾರ, ನಾಗರಾಜ ಅಂಗನವಾಡಿ ಇದ್ದರು.
ರಾಹುಲ್ ಮಾಳಗೆ ಕಾರ್ಯಕ್ರಮ ನಿರೂಪಿಸಿದರು. ಆನಂದರಾಜ ಸ್ವಾಗತಿಸಿದರು. ಶ್ರೀನಿವಾಸ ಕುಲಕರ್ಣಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.