ಕಲಬುರಗಿ: ‘ಮುಸ್ಲಿಂ ಯುವತಿಯರನ್ನು ಮದುವೆಯಾಗುವ ಹಿಂದೂ ಯುವಕರಿಗೆ ₹5 ಲಕ್ಷ ನೀಡುವೆ’ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ’ ಎಂಬ ಆರೋಪದಡಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಇಲ್ಲಿನ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಶಾಸಕ ಯತ್ನಾಳ ಹೇಳಿಕೆ ಒಂದು ಸಮುದಾಯವನ್ನು ಪ್ರಚೋದಿಸುವಂತಿದೆ. ಕಾನೂನು ಸುವ್ಯವಸ್ಥೆ ಸಮಸ್ಯೆ ಸೃಷ್ಟಿಸುವಂತಿದೆ" ಎಂದು ಆರೋಪಿಸಿ ಕಲಬುರಗಿಯ ಖಮರ್ ಕಾಲೊನಿಯ ಖದ್ಮತ್–ಎ–ಮಿಲ್ಲತ್ ಕಮಿಟಿಯ ಅಧ್ಯಕ್ಷ ಖಮರ್ ಜುನೈದ್ ಖುರೇಶಿ ಅವರು ದೂರು ನೀಡಿದ್ದರು’ ಎಂದು ಇಲ್ಲಿನ ರೋಜಾ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಕೊಪ್ಪಳದಲ್ಲಿ ಮುಸ್ಲಿಂ ಯುವಕನಿಂದ ಕೊಲೆಯಾದ ಗವಿಸಿದ್ಧಪ್ಪ ನಾಯಕ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಯತ್ನಾಳ ಅವರು ಸುದ್ದಿಗಾರರೊಂದಿಗೆ ಮಾತನಾಡಿದಾಗ ಈ ಹೇಳಿಕೆ ನೀಡಿದ್ದರು.
ವಿಜಯಪುರ ವರದಿ: ‘ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಇತ್ತೀಚೆಗೆ ಕೊಪ್ಪಳದಲ್ಲಿ ನೀಡಿದ ಹೇಳಿಕೆ ಕುರಿತು ಇಲ್ಲಿ ಮೊಕದ್ದಮೆ ದಾಖಲಾಗಿದೆ.
ವಿಜಯಪುರ ಮಹಾನಗರ ಪಾಲಿಕೆ ಮಾಜಿ ಸದಸ್ಯ ಮೈನುದ್ದೀನ್ ಬೀಳಗಿ ಅವರು ನಗರದ ಗಾಂಧಿಚೌಕಿ ಪೊಲೀಸ್ ಠಾಣೆಯಲ್ಲಿ ಬುಧವಾರ ಯತ್ನಾಳ ವಿರುದ್ಧ ದೂರು ದಾಖಲಿಸಿದ್ದಾರೆ.
ಶಾಸಕರ ಹೇಳಿಕೆ ಸಮಾಜದಲ್ಲಿ ಶಾಂತಿ, ಸೌಹಾರ್ದ ಕದಡುವಂತಿದೆ. ಕೋಮು ದ್ವೇಷಕ್ಕೆ ಕಾರಣವಾಗಿದೆ. ಅವರ ವಿರುದ್ಧ ಕಲಂ 299, 193, 353(1)(ಸಿ),353(2) ಬಿ.ಎನ್.ಎಸ್.2023 ಅಡಿಯಲ್ಲಿ ಕ್ರಮಕೈಗೊಳ್ಳುವಂತೆ ದೂರು ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.