ಕಲಬುರ್ಗಿ: ‘ಸಾಮಾಜಿಕ ಪರಿವರ್ತನೆಗೆ ಅನುಭವ ಮಂಟಪ ಸ್ಥಾಪನೆ ಮಾಡಿ, ಕೆಳವರ್ಗದ ಶರಣರನ್ನು ಒಂದುಗೂಡಿಸಿ ವಚನ ಚಳವಳಿಯ ಮೂಲಕ ಸಮಾನತೆಗೆ ಮುಂದಾದ ಬಸವಣ್ಣ ಮಹಾನ್ ಚಿಂತಕ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿಗಳಾದ ಚಂದ್ರಕಾಂತ ಯಾತನೂರ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸೋಮವಾರ ಸುಭಾಷಚಂದ್ರ ಪಾಟೀಲ ಸ್ಮಾರಕ ಜನ ಕಲ್ಯಾಣ ಟ್ರಸ್ಟ್ ಹಮ್ಮಿಕೊಂಡಿದ್ದ, ಎರಡನೇ ವರ್ಷದ ‘ಬಸವ ಪುರಸ್ಕಾರ’ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘12ನೇ ಶತಮಾನದಲ್ಲೇ ಶೋಷಿತ ಸಮಾಜವನ್ನು ಎತ್ತಿ ಹಿಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲಬೇಕು’ ಎಂದರು.
ರಾಷ್ಟ್ರೀಯ, ರಾಜ್ಯ, ಕಲ್ಯಾಣ ಕರ್ನಾಟಕ ಮಟ್ಟದ ಬಸವ ಪುರಸ್ಕಾರ ಸ್ವೀಕರಿಸಿದ ವಿ.ಜಿ. ಪೂಜಾರ, ಕಲ್ಯಾಣರಾವ ಪಾಟೀಲ, ಬದರಿನಾಥ ಜಹಗೀರದಾರ, ದಾಕ್ಷಾಯಣಿ ಬಳಬಟ್ಟಿಮಠ, ಚಿ.ಸಿ. ನಿಂಗಣ್ಣ, ಪ್ರೇಮಾ ಹೂಗಾರ, ಶರಣು ಅತನೂರ, ಮನೋಹರ ಮರಗುತ್ತಿ, ನೀಲಮ್ಮ ಹಿರೇಮಠ, ಎಲ್.ಬಿ.ಕೆ. ಆಲ್ದಾಳ, ಹೇಮಾ ದೇಶಮುಖ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಎಚ್.ಟಿ.ಪೋತೆ ಮಾತನಾಡಿದರು. ಮುಖ್ಯ ಅತಿಥಿಗಳಾದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕುಪೇಂದ್ರ ಪಾಟೀಲ, ಸಾಹಿತಿ ಮಹಿಪಾಲರೆಡ್ಡಿ ಮುನ್ನೂರು, ಶರಣಗೌಡ ಪಾಟೀಲ ವೇದಿಕೆಯ ಮೇಲೆ ಇದ್ದರು.
ಶರಣಬಸಪ್ಪ ವಡ್ಡಣಕೇರಿ ನಿರೂಪಿಸಿದರು. ಗಾಯಕ ಶಿವಶಂಕರ ಬಿರಾದಾರ ಅವರಿಂದ ಸಂಗೀತ ಕಾಯಕ್ರಮ ನೆರವೇರಿತು. ಸಾಹಿತಿ ಸಿದ್ದರಾಮ ಹೊನ್ಕಲ, ಬಿ.ಎಚ್. ನಿರಗುಡಿ, ಡಾ.ನಾಗಪ್ಪ ಗೋಗಿ, ವಿಶ್ವನಾಥ ಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.