ಕಲಬುರ್ಗಿ: ಇಲ್ಲಿನ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಮುಷ್ತಾಕ್ ಅಹ್ಮದ್ ಐ. ಪಟೇಲ್ ಅವರ ಅವಧಿ ಮುಕ್ತಾಯವಾಗಿದ್ದರಿಂದ ಅವರನ್ನು ಮಾತೃ ವಿ.ವಿ.ಯಾದ ಹೈದರಾಬಾದ್ನ ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯಕ್ಕೆ ವಾಪಸ್ ಕಳಿಸಲಾಗಿದ್ದು, ಅವರ ಸ್ಥಾನಕ್ಕೆ ಡೀನ್ ಪ್ರೊ.ಬಸವರಾಜ ಡೋಣೂರ ಅವರನ್ನು ಬುಧವಾರ ನೇಮಕ ಮಾಡಲಾಗಿದೆ.
ಪಟೇಲ್ ಅವರು 2018ರಲ್ಲಿ ನಿಯೋಜನೆ ಮೇರೆಗೆ ಇಲ್ಲಿ ಕುಲಸಚಿವರಾಗಿ ನೇಮಕವಾಗಿದ್ದರು. ಕುಲಪತಿಯಾಗಿದ್ದ ಪ್ರೊ. ಎಚ್.ಎಂ.ಮಹೇಶ್ವರಯ್ಯ ಅವರ ಅವಧಿಯಲ್ಲಿ ನಿಯೋಜನೆಯನ್ನು ಮುಂದುವರಿಸುವಂತೆ ಪಟೇಲ್ ಮನವಿ ಸಲ್ಲಿಸಿದ್ದರು. ಆದರೆ, ಮುಂದಿನ ಕುಲಪತಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮಹೇಶ್ವರಯ್ಯ ಷರಾ ಬರೆದಿದ್ದರು. ಹಂಗಾಮಿ ಕುಲಪತಿ ಪ್ರೊ.ಎಂ.ವಿ. ಅಳಗವಾಡಿ ಅವರ ನೇತೃತ್ವದಲ್ಲಿ ಸಭೆ ಸೇರಿದ ಆಡಳಿತ ಮಂಡಳಿಯು ಪ್ರೊ.ಮುಷ್ತಾಕ್ ಅಹ್ಮದ್ ಪಟೇಲ್ ಅವರನ್ನು ಮಾತೃ ವಿ.ವಿ.ಗೆ ವಾಪಸ್ ಕಳಿಸುವ ನಿರ್ಣಯ ಕೈಗೊಂಡಿತು. ಮುಂದಿನ ಆದೇಶದವರೆಗೆ ಪ್ರೊ.ಡೋಣೂರ ಹಂಗಾಮಿ ಕುಲಸಚಿವರಾಗಿ ಮುಂದುವರಿಯಲಿದ್ದಾರೆ.
ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಸಾತಿಹಾಳ ಗ್ರಾಮದ ಪ್ರೊ. ಡೋಣೂರ ಅವರು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಮಧ್ಯಪ್ರದೇಶದ ಅಮರಕಂಟಕ ಬುಡಕಟ್ಟು ವಿ.ವಿ. ಕುಲಸಚಿವರಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕ ಕೇಂದ್ರೀಯ ವಿ.ವಿ. ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ, ಪ್ರಸ್ತುತ ಡೀನರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.