
ಅಫಜಲಪುರ: ‘ತಾಲ್ಲೂಕಿನಲ್ಲಿ ಭೀಮ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿರುವ ಏತ ನೀರಾವರಿ ಯೋಜನೆಯಿಂದ ಕೃಷಿಗೆ, ಕುಡಿಯುವ ನೀರಿಗೆ ಅನುಕೂಲವಾಗಿದೆ. ಜೊತೆಗೆ ಅಂತರ್ಜಲ ಮಟ್ಟವು ಹೆಚ್ಚಳವಾಗಿದ್ದು ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಹಸಿರು ಕ್ರಾಂತಿಗೆ ಕಾರಣವಾಗಲಿದೆ’ ಎಂದು ಶಾಸಕ ಎಂ.ವೈ. ಪಾಟೀಲ ಅಭಿಪ್ರಾಯಪಟ್ಟರು.
ತಾಲೂಕಿನ ಸೊನ್ನ ಭೀಮ ಬ್ರಿಡ್ಜ್ ಕಂ ಬ್ಯಾರೇಜ್ ಭರ್ತಿಯಾಗಿದ್ದರಿಂದ ಸೋಮವಾರ ಬಾಗಿನ ಅರ್ಪಿಸಿ ರೈತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಭೀಮ ಏತ ನೀರಾವರಿ ಯೋಜನೆ ರೈತರ ಜೀವನಾಡಿಯಾಗಿದೆ. ಸುಮಾರು 60 ಸಾವಿರ ಎಕರೆಗೆ ನೀರುಣಿಸುತ್ತದೆ. ಆದರೆ ಈ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಈ ಯೋಜನೆಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ತಂದು ಕಾಲುವೆಯ ಕಟ್ಟಕಡೆಯ ರೈತನ ಜಮೀನಿಗೂ ನೀರು ಹರಿಸಲಾಗುವುದು’ ಎಂದರು.
‘ತಾಲ್ಲೂಕಿನಲ್ಲಿ ಸುಮಾರು ₹400 ಕೋಟಿ ವೆಚ್ಚದಲ್ಲಿ 13 ಕೆರೆ ತುಂಬುವ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಭೀಮಾ ನದಿಗೆ ಹೆಚ್ಚು ನೀರು ಬಂದಾಗ ಆ ನೀರನ್ನು ಬಳಸಿಕೊಂಡು ಕೆರೆಗಳನ್ನ ತುಂಬಲಾಗುವುದು. ತಾಲ್ಲೂಕಿನ ಸಮಗ್ರ ನೀರಾವರಿಗೆ ನನ್ನ ಶಕ್ತಿ ಮೀರಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿದರು.
ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ತಹಶೀಲ್ದಾರ್ ಸಂಜು ಕುಮಾರ್ ದಾಸರ, ಭೀಮ ಏತ ನೀರಾವರಿವಾಗದ ಉಪ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಸಂತೋಷ್ ಕುಮಾರ್ ಸಜ್ಜನ್ ಮಾತನಾಡಿದರು.
ಕರ್ನಾಟಕ ನೀರಾವರಿ ನಿಗಮದ ಜಿಲ್ಲಾ ವಲಯದ ಮುಖ್ಯ ಇಂಜಿನಿಯರ್ ಶಿವಸ್ವಾಮಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಂತೋಷ್ ಪಾಟೀಲ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಶಿವಾನಂದ ಗಾಡಿ ಸಾಹುಕಾರ, ತಾಲ್ಲೂಕು ಪಂಚ ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ಪ್ರಕಾಶ್ ಜಮಾದಾರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿದ್ದಾರ್ಥ ಬಸರಿ ಗಿಡದ, ತಾಲ್ಲೂಕು ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಅಣವೀರಯ್ಯ ನೆಹರು ಮಠಪತಿ , ಮುಖಂಡರಾದ ಫಲಾಲಸಿಂಗ ರಾಠೋಡ್, ಗುರುಮಾಂತಯ್ಯ ಮಠಪತಿ, ರಾಜಕುಮಾರ ಬಬಲಾದ, ಪ್ರವೀಣ್ ಕಲ್ಲೂರ, ಅಂಬರೀಶ ಬುರಲಿ, ಸಂಗಣ್ಣಾಗೌಡ ಪಾಟೀಲ, ಗೌರ ಬಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಇಮಾಮ ಶೇಖ ಅಳ್ಳಗಿಕೆ, ಭೀಮರಾವ ಗೌರ, ಮಾಜೀದ ಪಟೇಲ, ಸುಧಾಕರ, ಶ್ರೀಶೈಲಗೌಡ ಪಾಟೀಲ, ಶ್ರೀಶೈಲ ಸೊನ್ನ, ಜೆಇ ಸುರೇಶ ಗಾಣಿಗೇರ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.