
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಮಾಶ್ಯಾಳದ ಬಳಿ ತೆರಳುವಾಗ ಪೊಲೀಸರು ಮಣಿಕಂಠ ರಾಠೋಡ ಅವರನ್ನು ಬಂಧಿಸಿದರು
ಜೇವರ್ಗಿ: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಚಿತ್ತಾಪುರ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರನ್ನು ಅಫಜಲಪುರ ತಾಲ್ಲೂಕಿನ ಶಿರವಾಳ ಹತ್ತಿರ ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ತಾಲ್ಲೂಕಿನ ನಾರಾಯಣಪುರ ಗ್ರಾಮದ ರಶೀದ್ ದಸ್ತಗೀರ್ ಇನಾಮದಾರ ಮುತ್ಯಾ ಹಾಗೂ ಅವರ ಕಾರು ಚಾಲಕ ಜುಬೇರ್, ಭಾಗೇಶ ಎಂಬುವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ರಾಠೋಡ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಸಂಜೆ ತಾಲ್ಲೂಕಿನ ನಾರಾಯಣಪುರ ಗ್ರಾಮಕ್ಕೆ ತೆರಳಿದ್ದ ಮಣಿಕಂಠ ರಾಠೋಡ ಗ್ರಾಮಸ್ಥರೊಂದಿಗೆ ರಶೀದ್ ಮುತ್ಯಾ ಅವರು ಅಮಾಯಕ ಜನರನ್ನು ವಂಚನೆ ಮಾಡುತ್ತಾ ಜನರ ನಂಬಿಕೆ ಜತೆ ಆಟವಾಡುತ್ತಿದ್ದಾರೆ. ದರ್ಗಾಕ್ಕೆ ಬಂದ ಹಲವಾರು ಜನರಿಗೆ ಮೋಸ ಮಾಡಿದ್ದಾರೆ. ದೇವರ ಹೆಸರಿನ ಮೇಲೆ ಹಣ, ಆಭರಣ ಹಾಗೂ ವೈಯಕ್ತಿಕ ಲಾಭ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಕೂಡಲೇ ಅವರನ್ನು ಗ್ರಾಮದಿಂದ ಗಡಿಪಾರು ಮಾಡಬೇಕು ಹಾಗೂ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುವ ವೇಳೆ ಗಲಾಟೆ ಆರಂಭವಾಗಿದೆ. ಇದೇ ವೇಳೆ ಹಜರತ್ ಇಮಾಮ್ ಖಾಸಿಂ ದರ್ಗಾ ಬಳಿ ಇದ್ದ
ರಶೀದ್ ಮುತ್ಯಾ, ಚಾಲಕ ಜುಬೇರ್ ಮತ್ತು ಭಾಗೇಶ ಅವರ ಮೇಲೆ ಹಲ್ಲೆ ನಡೆದಿದ್ದು, ತಕ್ಷಣ ಅವರನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಭಾಗೇಶ ಅವರು ನೀಡಿದ ದೂರಿನ ಅನ್ವಯ ಮಣಿಕಂಠ ರಾಠೋಡ ಅವರನ್ನು ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಅಫಜಲಪುರ ತಾಲ್ಲೂಕಿನ ಶಿರವಾಳ ಕ್ರಾಸ್ ಹತ್ತಿರ ಕಲಬುರಗಿಗೆ ತೆರಳುತ್ತಿದ್ದ ವೇಳೆ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ನೆಲೋಗಿ ಪಿಎಸ್ಐ ಚಿದಾನಂದ ಸವದಿ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.