ADVERTISEMENT

ವಿದ್ವತ್‌ ಪೂರ್ಣ ಕೃತಿ ‘ಏವೂರ’

ಹನುಮಾಕ್ಷಿ ಗೋಗಿ ಅವರ ಶಾಸನ ಕೃತಿ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 3:44 IST
Last Updated 14 ಫೆಬ್ರುವರಿ 2021, 3:44 IST
ಸಾಹಿತಿ ಹನುಮಾಕ್ಷಿ ಗೋಗಿ ಅವರು ರಚಿಸಿದ ‘ಏವೂರ’ ಶಾಸಕ ಕೃತಿಯನ್ನು ಕಲಬುರ್ಗಿಯಲ್ಲಿ ಶನಿವಾರ ಲೋಕಾರ್ಪಣೆ ಮಾಡಲಾಯಿತು. ಮಧುಮತಿ ಪಾಟೀಲ, ಅರುಣ ಕುಲಕರ್ಣಿ, ಸುರೇಶ ಬಡಿಗೇರ, ಟಿ.ಡಿ.ರಾಜಣ್ಣ, ಸ್ವಾಮಿರಾವ್‌ ಕುಲಕರ್ಣಿ, ವಿಜಯಕುಮಾರ ತೇಗಲತಿಪ್ಪಿ, ಮಹಿಪಾಲ ರೆಡ್ಡಿ ಮುನ್ನೂರ ಇದ್ದರು
ಸಾಹಿತಿ ಹನುಮಾಕ್ಷಿ ಗೋಗಿ ಅವರು ರಚಿಸಿದ ‘ಏವೂರ’ ಶಾಸಕ ಕೃತಿಯನ್ನು ಕಲಬುರ್ಗಿಯಲ್ಲಿ ಶನಿವಾರ ಲೋಕಾರ್ಪಣೆ ಮಾಡಲಾಯಿತು. ಮಧುಮತಿ ಪಾಟೀಲ, ಅರುಣ ಕುಲಕರ್ಣಿ, ಸುರೇಶ ಬಡಿಗೇರ, ಟಿ.ಡಿ.ರಾಜಣ್ಣ, ಸ್ವಾಮಿರಾವ್‌ ಕುಲಕರ್ಣಿ, ವಿಜಯಕುಮಾರ ತೇಗಲತಿಪ್ಪಿ, ಮಹಿಪಾಲ ರೆಡ್ಡಿ ಮುನ್ನೂರ ಇದ್ದರು   

ಕಲಬುರ್ಗಿ: ‘ಸಾಹಿತಿ ಹನುಮಾಕ್ಷಿ ಗೋಗಿ ಅವರು ರಚಿಸಿದ ‘ಏವೂರ’ ಶಾಸನ ಕೃತಿಯು ವಿದ್ವತ್‌ಪೂರ್ಣವಾಗಿದೆ. ಇತಿಹಾಸ ಓದುಗರು ಹಾಗೂ ಸಾಮಾನ್ಯ ಜನರಿಗೂ ಅರ್ಥವಾಗುವಂಥ ಕೈಪಿಡಿ ಇದು’ ಎಂದು ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಟಿ.ಡಿ. ರಾಜಣ್ಣ ಹೇಳಿದರು.

ನಗರದಲ್ಲಿ ಶನಿವಾರಸಮಾನ ಮನಸ್ಕ ಸಾಹಿತ್ಯಾಸಕ್ತರ ಬಳಗದಿಂದ ಆಯೋಜಿಸಿದ್ದ ‘ಏವೂರ’ ಶಾಸನ ಪುಸ್ತಕ ಲೋಕಾರ್ಪಣೆ ಹಾಗೂಅಭಿನಂದನಾ ಸಮಾರಂಭದಲ್ಲಿ ಅವರು ಕೃತಿ ಪರಿಚಯಿಸಿದರು.

‘ಸ್ಥಳೀಯ ಚರಿತ್ರೆಯನ್ನು ಶಾಸನಗಳ ಹಿನ್ನೆಲೆಯಲ್ಲಿ ಈ ಕೃತಿ ಬರೆದಿದ್ದು, ಸಮರ್ಥವಾಗಿದೆ. ಇಂಥ ಸಂಶೋಧನಾ ಕೃತಿ ಹೊರತರುವುದು ತೀವ್ರ ಕಷ್ಟಕರ’ ಎಂದರು.

ADVERTISEMENT

ಸಹಾಯಕ ಕೃಷಿ ನಿರ್ದೇಶಕಿ ಮಧುಮತಿ ಪಾಟೀಲ ಮಾತನಾಡಿ, ‘ಕಲ್ಯಾಣ ಕರ್ನಾಟಕ ಯಾವ ಕ್ಷೇತದಲ್ಲೂ ಹಿಂದೆ ಬಿದ್ದಿಲ್ಲ. ಸಾಂಸ್ಕೃತಿಕ, ಐತಿಹಾಸಿಕ ಹಾಗೂ ಸಂಗೀತದಿಂದ ಶ್ರೀಮಂತಿಕೆ ನಾಡು ಇದಾಗಿದೆ. ಇದರ ಇತಿಹಾಸದ ಮೇಲೆ ಬೆಳಕು ಚೆಲ್ಲಬೇಕಿದೆ’ ಎಂದರು.

ಸಾಹಿತಿ ಡಾ.ಸ್ವಾಮಿರಾವ್ ಕುಲಕರ್ಣಿ ಮಾತನಾಡಿ, ‘ಶಾಸನಗಳ ಕುರಿತು ಪುಸ್ತಕ ಬರೆಯುವುದು ಸಾಹಸದ ಕೆಲಸ. ಇದಕ್ಕೆ ತಾಳ್ಮೆ, ಐತಿಹಾಸಿಕ ಹಾಗೂ ಸಾಹಿತ್ಯದ ಜ್ಞಾನ ಅಪಾರವಾಗಿ ಬೇಕು’ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಅಭಿನಂದನಾ ನುಡಿ ಸಮರ್ಪಿಸಿದರು. ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ವಿನೋದಕುಮಾರ ಜನವರಿ ಇದ್ದರು.

ಬಳಗದ ಸಂಚಾಲಕ ಅರುಣ ಕುಲಕರ್ಣಿ ಸ್ವಾಗತಿಸಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಪ್ರಾಸ್ತಾವಿಕ ಮಾತನಾಡಿದರು. ಶಿವರಾಜ ಅಂಡಗಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.