ADVERTISEMENT

ಕಲಬುರ್ಗಿ: ‘ಸ್ತನ್ಯಪಾನದಿಂದ ಅಕಾಲಿಕ ಮರಣಕ್ಕೆ ತಡೆ’

ಗರ್ಭಣಿಯರಿಗೆ ಕೋವಿಡ್‌ ಲಸಿಕೆ ಜಾಗೃತಿ, ಬಾಣಂತಿಯರಿಗೆ ಸ್ತನ್ಯಪಾನ ಸಪ್ತಾಹ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 3:49 IST
Last Updated 10 ಆಗಸ್ಟ್ 2021, 3:49 IST
ಕಲಬುರ್ಗಿಯಲ್ಲಿ ಸೋಮವಾರ ಆಯೋಜಿಸಿದ್ದ ಕೋವಿಡ್‌ ಲಸಿಕೆ ಕಾಗೃತಿ ಹಾಗೂ ಸ್ತನ್ಯಪಾನ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಡಾ.ಮಲ್ಲಾರಾವ್ ಮಲ್ಲೆ ಅವರು ಗರ್ಭಿಣಿ ಕಾವೇರಿ ಅವರಿಗೆ ಲಸಿಕೆ ಹಾಕಿದರು. ನ್ಯಾಯಾಧೀಶರಾದ ಸುಶಾಂತ ಎಂ. ಚೌಗಲೆ, ಡಿಎಚ್‌ಒ ಡಾ.ಶರಣಬಸಪ್ಪ ಗಣಜಲಖೇಡ ಇತರರು ಇದ್ದರು
ಕಲಬುರ್ಗಿಯಲ್ಲಿ ಸೋಮವಾರ ಆಯೋಜಿಸಿದ್ದ ಕೋವಿಡ್‌ ಲಸಿಕೆ ಕಾಗೃತಿ ಹಾಗೂ ಸ್ತನ್ಯಪಾನ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಡಾ.ಮಲ್ಲಾರಾವ್ ಮಲ್ಲೆ ಅವರು ಗರ್ಭಿಣಿ ಕಾವೇರಿ ಅವರಿಗೆ ಲಸಿಕೆ ಹಾಕಿದರು. ನ್ಯಾಯಾಧೀಶರಾದ ಸುಶಾಂತ ಎಂ. ಚೌಗಲೆ, ಡಿಎಚ್‌ಒ ಡಾ.ಶರಣಬಸಪ್ಪ ಗಣಜಲಖೇಡ ಇತರರು ಇದ್ದರು   

ಕಲಬುರ್ಗಿ: ‘ತಾಯಿಯು ಮಗುವಿಗೆ ಸ್ತನ್ಯಪಾನ ಮಾಡುವುದರಿಂದ ಶಿಶುಗಳ ಅಕಾಲಿಕ ಮರಣ ತಡೆಯಬಹುದು. ಇದರಿಂದ ತಾಯಿ ಆರೋಗ್ಯ ಜತೆಗೆ ಮಗುವಿನ ಆರೋಗ್ಯವೂ ವೃದ್ಧಿಸುತ್ತದೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುಶಾಂತ ಎಂ. ಚೌಗಲೆ ಹೇಳಿದರು.

ಶಿಶು ಅಭಿವೃದ್ಧಿ ಯೋಜನೆ, ಸೇಂಟ್ ಜಾನ್ಸ್ ನಗರದ ಕುಟುಂಬ ಕಲ್ಯಾಣ ಕೇಂದ್ರ, ಕಲಬುರ್ಗಿ ಪ್ರಗತಿ ಅಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ಕೋವಿಡ್ -19 ಲಸಿಕೆ ಕುರಿತು ಗರ್ಭಣಿಯರಿಗೆ ಜಾಗೃತಿ ಹಾಗೂ ಸ್ತನ್ಯಪಾನ ಸಪ್ತಾಹ-2021’ ಕಾರ್ಯಕ್ರಮಕ್ಕೆ ಸಸಿಗೆ ನೀರೆರೆಯುವ ಮೂಲಕ ಉದ್ಫಾಟಿಸಿ ಅವರು ಮಾತನಾಡಿದರು.

‘ತಾಯಿಯು ಮಕ್ಕಳಿಗೆ ಸ್ತನ್ಯಪಾನ ಮಾಡುವುದರಿಂದ ಮಕ್ಕಳನ್ನು ಅಪೌಷ್ಟಿಕತೆಯಿಂದ ತಪ್ಪಿಸಬಹುದು. ಯು.ಎನ್.ಸಿ.ಎಫ್ ಹಾಗೂ ಡಬ್ಲೂ.ಎಚ್.ಒ.ಗಳು ಸ್ತನ್ಯಪಾನ ಮಹತ್ವದ ಬಗ್ಗೆ ಅರಿವು ಮೂಡಿಸುವ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿವೆ. ವಿಶ್ವದಾದ್ಯಂತ ಎಲ್ಲಾ ದೇಶಗಳಲ್ಲಿ ಎದೆಹಾಲಿನ ಮಹತ್ವದ ಕುರಿತು ತಾಯಂದಿರಿಗೆ ಸಮುದಾಯ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕೆಂಬುವುದು ಇದರ ಉದ್ದೇಶವಾಗಿದೆ. ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಈ ಕುರಿತು ತರಬೇತಿ ನೀಡಬೇಕು’ ಎಂದು ಹೇಳಿದರು.

ADVERTISEMENT

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ ಮಾತನಾಡಿ, ‘ಮಗುವಿನ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ತಾಯಿ ಹಾಲು ಬಹಳ ಮುಖ್ಯವಾಗಿದೆ. ಮಗು ಸದೃಢವಾಗಬೇಕಾದರೆ ಪ್ರತಿದಿನ ಎದೆಹಾಲು ಕುಡಿಸಬೇಕು. ಗರ್ಭಣಿಯರು ಹಾಗೂ ಬಾಣಂತಿಯರಿಗೆ ಸ್ತನ್ಯಪಾನ ಸಪ್ತಾಹ ಕುರಿತು ಹೆಚ್ಚಿನ ಅರಿವು ಮೂಡಿಸಬೇಕಾಗಿದೆ. ಆಧುನಿಕ ಕಾಲದಲ್ಲಿ ಸ್ತನ್ಯಪಾನ ಕುರಿತು ಮಹಿಳೆಯರಿಗೆ ಅರಿತುಕೊಳ್ಳುವ ಸಂದರ್ಭ ಬಂದಿದೆ’ ಎಂದರು.

‘ಇದಲ್ಲದೇ ಸರ್ಕಾರದ ಮಾರ್ಗಸೂಚಿ ಬಂದ ನಂತರವಷ್ಟೇ ಗರ್ಭಿಣಿಯರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಒಂದು ವಾರದ ಕೋವಿಡ್ -19ರ ಲಸಿಕೆ ಕುರಿತು ಗರ್ಭಣಿಯರಿಗೆ ಜಾಗೃತಿ ಹಾಗೂ ಸ್ತನ್ಯಪಾನ ಸಪ್ತಾಹ ಹಮ್ಮಿಕೊಳ್ಳಲಾಗುವುದು’ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸೇಂಟ್ ಜಾನ್ಸ್ ನಗರ ಕುಟುಂಬ ಕಲ್ಯಾಣ ಕೇಂದ್ರದ ವೈದ್ಯಾಧಿಕಾರಿ ಡಾ.ಮಲ್ಲಾರಾವ್‌ ಮಲ್ಲೆ ಮಾತನಾಡಿದರು. ಇದಕ್ಕೂ ಮುನ್ನ ಗರ್ಭಣಿ ಕಾವೇರಿ ಉದಯಕುಮಾರ ಅವರಿಗೆ ಕೋವಿಡ್ ಲಸಿಕೆ ಹಾಕಲಾಯಿತು.ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಪ್ರಭುಲಿಂಗ ಕೆ. ಮಾನಕರ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ರಾಜಕುಮಾರ ಕುಲಕರ್ಣಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಖಾನಾಪೂರ ವೈದ್ಯಾಧಿಕಾರಿ ಡಾ.ಮಂಗಲಾ ಪಾಟೀಲ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರೇಮ ಕಲಬುರಗಿ ಸೇರಿ ಹಲವಾರು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು, ಸಿಬ್ಬಂದಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.