ಕಲಬುರ್ಗಿ: ‘ಸರ್ಕಾರಿ ವಸತಿಗೃಹಗಳ ಹಂಚಿಕೆ ಸಂದರ್ಭದಲ್ಲಿ ಅರ್ಹರಿಗೆ ವಸತಿ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಬೇಕು’ ಎಂದು ಪ್ರಾದೇಶಿಕ ಆಯುಕ್ತ ಸುಬೋಧ ಯಾದವ್ ಅಧಿಕಾರಿಗಳಿಗೆ ಸೂಚಿಸಿದರು.
ಲೋಕೋಪಯೋಗಿ ಇಲಾಖೆಯಡಿಯ ಸರ್ಕಾರಿ ವಸತಿಗೃಹಗಳ ಹಂಚಿಕೆಗೆ ಸಂಬಂಧಿಸಿದಂತೆ ಈಚೆಗೆ ಜರುಗಿದ ಸಭೆಯಲ್ಲಿ ಅವರು ಮಾತನಾಡಿದರು.
‘ವಸತಿ ಕೋರಿ ಅರ್ಜಿ ಸಲ್ಲಿಸಿರುವ ಅಧಿಕಾರಿ-ಸಿಬ್ಬಂದಿಗೆ ಜೇಷ್ಠತಾ ಪಟ್ಟಿವಾರು ನೋಟಿಸ್ ನೀಡಬೇಕು. ವಸತಿಗೃಹ ಹಂಚಿಕೆ ಪೂರ್ವದಲ್ಲಿ ಅವರ ಸೇವಾ ವಿವರ, ಸ್ವಂತ ಮನೆ ಇರುವ ಬಗ್ಗೆ ಖಾತ್ರಿ ಮಾಡಿಕೊಂಡು ವಸತಿ ಗೃಹಗಳನ್ನು ಹಂಚಿಕೆ ಮಾಡಬೇಕು’ ಎಂದು ತಿಳಿಸಿದರು.
‘ರಾಜಾಪುರ ಕಾಲೊನಿಯಲ್ಲಿ ‘ಸಿ’ ದರ್ಜೆ ನೌಕರರ ವಸತಿಗೃಹಗಳಿಗೆ ನೌಕರರಿಂದ ಬೇಡಿಕೆ ಬರುತ್ತಿಲ್ಲ. ಹೀಗಾಗಿ ಇಲ್ಲಿ ವಸತಿಗೃಹಕ್ಕೆ ಬೇಡಿಕೆ ಇಡುವ ‘ಡಿ’ ದರ್ಜೆಯ ನೌಕರರನ್ನು ಪರಿಗಣಿಸಿ ಅವರಿಗೆ ಹಂಚಿಕೆ ಮಾಡಲು ಕ್ರಮ ಜರುಗಿಸಬೇಕು’ ಎಂದು ನಿರ್ದೇಶಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜಾ ಪಿ., ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಅಮೀನ್ ಮುಖ್ತಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.