ಕಮಲಾಪುರ: ತಾಲ್ಲೂಕಿನ ನವನಿಹಾಳ ಛತ್ರುನಾಯಕ ತಾಂಡಾದಲ್ಲಿ ಮಂಗಳವಾರ ಸುರಿದ ಭಾರೀ ಮಳೆ ಹಾಗೂ ಸಿಡಿಲಿಗೆ ಎತ್ತು ಸಾವನ್ನಪ್ಪಿದೆ.
ರಾಮಚಂದ್ರ ಗೋಪು ಅವರಿಗೆ ಎತ್ತು ಸೇರಿದ್ದಾಗಿದೆ. ಜೋಡೆತ್ತುಗಳನ್ನು ಹೊಲದಲ್ಲಿ ಬೇವಿನ ಮರದ ಕೆಳಗೆ ಕಟ್ಟಲಾಗಿತ್ತು. ಮಧ್ಯಾಹ್ನ ಮಳೆಯಾಗುತ್ತಿರುವಾಗ ಸಿಡಿಲು ಬಡಿದಿದೆ. ಅದರಲ್ಲಿ ಒಂದು ಎತ್ತು ಮೃತಪಟ್ಟಿದ್ದು, ಇನ್ನೊಂದು ಎತ್ತು ಗಾಯಗೊಂಡಿದೆ. ಕೆಲ ದಿನಗಳ ಹಿಂದೆ ₹1.50 ಲಕ್ಷಕ್ಕೆ ಈ ಜೋಡೆತ್ತುಗಳನ್ನು ಖರೀದಿಸಲಾಗಿತ್ತು. ಸುಮಾರು ₹ 80 ಸಾವಿರ ನಷ್ಟವಾಗಿದೆ. ಮಳೆಯಾಗಿದ್ದರಿಂದ ಬಿತ್ತನೆ ಕಾರ್ಯ ಶುರುವಾಗಲಿದ್ದು, ಉಳುಮೆಗೆ ತೊಂದರೆಯಾಗಲಿದೆ ಎಂದು ರೈತ ರಾಮಚಂದ್ರ ಬೇಸರ ವ್ಯಕ್ತಪಡಿಸಿದರು.
ಕಮಲಾಪುರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ಐ ಭೀಮರಾಯ ಪಾಟೀಲ ಮತ್ತಿತರರು ಭೇಟಿನೀಡಿ ಪರಿಶೀಲಿಸಿದರು.
ಉತ್ತಮ ಮಳೆ: ತಾಲ್ಲೂಕಿನಲ್ಲಿ ಮಂಗಳವಾರ ಉತ್ತಮ ಮಳೆ ಸುರಿದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಅಲ್ಲದೇ ಕೃಷಿ ಚಟುವಟಿಕೆಗಳು ಚುರುಕುಗೊಳ್ಳಲಿವೆ.
ಗುಡುಗು ಮಿಂಚಿನಿಂದಾಗಿ ಕೂಡಿದ ಮಳೆಯಿಂದಾಗಿ ಕೆಲವು ಕಡೆ ಹಾನಿಯಾಗಿದೆ. ಗಾಳಿಯ ರಭಸಕ್ಕೆ ಬಾಳೆ ತೋಟದಲ್ಲಿನ ಬಾಳೆಗಿಡಗಳಿಗೆ ಹಾನಿಯಾಗಿದೆ. ಭೂಮಿಯಲ್ಲಿ ತೇವಾಂಶ ಹೆಚ್ಚಿದ್ದು, ಇನ್ನೆರಡು ಮೂರು ಬಾರಿ ಮಳೆ ಸುರಿದರೆ ಬಿತ್ತನೆ ಕಾರ್ಯ ಆರಂಭಗೊಳ್ಳಲಿದೆ ಎಂದು ರೈತರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.