ಅಫಜಲಪುರ: ಕೋರ್ಟ್ ಆದೇಶ ನೀಡಿದರೂ ರಸ್ತೆ ಅಪಘಾತದ ಪರಿಹಾರ ನೀಡದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಅನ್ನು ಶನಿವಾರ ಅಫಜಲಪುರ ಬಸ್ ನಿಲ್ದಾಣದಿಂದ ಕೋರ್ಟ್ ಸಿಬ್ಬಂದಿ ಜಪ್ತಿ ಮಾಡಿದ್ದಾರೆ.
ತಾಲ್ಲೂಕಿನ ಚವಡಾಪುರ ಗ್ರಾಮದ ಬಳಿ 2019ರಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಚಿಕ್ಕೋಡಿ ಘಟಕಕ್ಕೆ ಸೇರಿದ ಬಸ್ ಡಿಕ್ಕಿ ಹೊಡೆದಿದ್ದರಿಂದ ಶರಣಬಸು ವಡ್ಡನಗೇರಿ ಎಂಬುವವರು ಮೃತಪಟ್ಟಿದ್ದರು. ಅಲ್ಲದೇ ಇನ್ನೊಬ್ಬ ಗಾಯಗೊಂಡಿದ್ದರು.
ಪರಿಹಾರಕ್ಕಾಗಿ ಕೋರ್ಟ್ನಲ್ಲಿ ದಾವೆ ಹೂಡಿದ್ದರು. ಅಫಜಲಪುರದ ಜೆಎಂಎಫ್ಸಿ ಹಿರಿಯ ಸಿವಿಲ್ ನ್ಯಾಯಾಧೀಶರು ₹ 34 ಲಕ್ಷ ಪರಿಹಾರ ಕೊಡುವಂತೆ ಆದೇಶಿಸಿದ್ದರು. 60 ದಿನದೊಳಗಾಗಿ ಪರಿಹಾರ ತುಂಬಬೇಕಾಗಿತ್ತು. ಆದರೆ 4 ವರ್ಷಗಳಿಂದ ಪರಿಹಾರದ ಹಣ ತುಂಬದೇ ನಿರ್ಲಕ್ಷ್ಯ ವಹಿಸಿದ್ದರಿಂದ ಅಫಜಲಪುರ ಜೆಎಂಎಫ್ಸಿ ನ್ಯಾಯಾಲಯ ಬಸ್ ಜಪ್ತಿ ವಾರಂಟ್ ಹೊರಡಿಸಿತ್ತು. ಕೋರ್ಟ್ ಸಿಬ್ಬಂದಿ ಶನಿವಾರ ಅಫಜಲಪುರ ಬಸ್ ನಿಲ್ದಾಣಕ್ಕೆ ಬಂದ ಚಿಕ್ಕೋಡಿ ಘಟಕದ (ಕೆಎ 32 ಎಫ್ 1172) ಬಸ್ ಅನ್ನು ಜಪ್ತಿ ಪಡಿಸಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.