ADVERTISEMENT

ವಕೀಲರ ಮನೆಯಲ್ಲಿ ನಗ–ನಗದು ಕಳವು

ಮುಸುಕುಧಾರಿಗಳಿಂದ ದಂಪತಿ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2019, 11:43 IST
Last Updated 13 ಮಾರ್ಚ್ 2019, 11:43 IST
ಮನೆಯಲ್ಲಿನ ಅಲ್ಮೇರಾದ ಬಾಗಿಲು ಮುರಿದು ಚಿನ್ನಾಭರಣ, ನಗದು ಕಳವು ಮಾಡಿರುವುದು
ಮನೆಯಲ್ಲಿನ ಅಲ್ಮೇರಾದ ಬಾಗಿಲು ಮುರಿದು ಚಿನ್ನಾಭರಣ, ನಗದು ಕಳವು ಮಾಡಿರುವುದು   

ಕಲಬುರ್ಗಿ: ನಗರದ ಗಾಬರೆ ಲೇಔಟ್‌ನಲ್ಲಿ ಬುಧವಾರ ಬೆಳಗಿನ ಜಾವ ಮನೆಯೊಂದರ ಕಿಟಕಿಯ ಗ್ರಿಲ್ ಮುರಿದು ಒಳನುಗ್ಗಿದ ಡಕಾಯಿತರು ದಂಪತಿ ಮೇಲೆ ಹಲ್ಲೆ ಮಾಡಿ ಚಿನ್ನಾಭರಣ ಮತ್ತು ನಗದು ದೋಚಿದ್ದಾರೆ.

ಹೈಕೋರ್ಟ್ ವಕೀಲ ವೀರಣ್ಣಗೌಡ ಬಿರಾದಾರ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. 3–4 ಜನ ಅಪರಿಚಿತ ಮುಸುಕುಧಾರಿಗಳು ವೀರಣ್ಣಗೌಡ ಹಾಗೂ ಇವರ ಪತ್ನಿ ಸಂಗೀತಾ ಬಿರಾದಾರ ಅವರ ಮೇಲೆ ಕಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆ. ಸಂಗೀತಾ ಅವರ ಕೊರಳಲ್ಲಿದ್ದ ಚಿನ್ನದ ಸರ, ಕೈಯಲ್ಲಿದ್ದ ಬಳೆಗಳನ್ನು ಕಿತ್ತುಕೊಂಡಿದ್ದಾರೆ. ಬಳಿಕ ಅಲ್ಮೇರಾದಲ್ಲಿದ್ದ 180 ಗ್ರಾಂ ಚಿನ್ನಾಭರಣ ಮತ್ತು ₹50 ಸಾವಿರ ನಗದು ಅಪಹರಿಸಿದ್ದಾರೆ.

‘ಬೆಳಿಗ್ಗೆ 3.30ರ ಸುಮಾರಿಗೆ ಮನೆಗೆ ನುಗ್ಗಿದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಭಯಭೀತರಾದ ವೀರಣ್ಣಗೌಡ ಮತ್ತು ಸಂಗೀತಾ, ‘ಚಿನ್ನಾಭರಣ, ನಗದು ತೆಗೆದುಕೊಂಡು ಹೋಗಿ. ಆದರೆ, ನಮಗೆ ಏನೂ ಮಾಡಬೇಡಿ’ ಎಂದು ಅಂಗಲಾಚಿದ್ದಾರೆ. ಇಷ್ಟಾದರೂ ಇವರ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ಗಾಯಾಳು ದಂಪತಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಹಾಗೂ ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿದರು.

ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.