
ಅಫಜಲಪುರ: ತಾಲ್ಲೂಕಿನ ಬಳ್ಳೂರ್ಗಿ ಎಸ್ಬಿಐ ಶಾಖೆಯಲ್ಲಿ ಹಣವೇ ಇಲ್ದೇ ಗುರುವಾರ ಗ್ರಾಹಕರು ಪರದಾಡಿದರು. ಗ್ರಾಹಕರೊಬ್ಬರು ₹ 60 ಸಾವಿರ ಮೊತ್ತದ ಚೆಕ್ ತೆಗೆದುಕೊಂಡು ಹೋದರೆ, ‘ನಮ್ಮಲ್ಲಿ ಅಷ್ಟೊಂದು ಹಣ ಇಲ್ಲ ಮೇ 28ರವರೆಗೆ ಇದೇ ಪರಿಸ್ಥಿತಿ ಮುಂದುವರಿಯಲಿದೆ. ನಮ್ಮ ಎಸ್ಬಿಐ ಮುಖ್ಯ ಬ್ಯಾಂಕಿನಲ್ಲಿಯೂ ಹಣ ಇಲ್ಲ. ಹೀಗಾಗಿ ನಾವು ಇದ್ದಷ್ಟರಲ್ಲಿ ಗ್ರಾಹಕರಿಗೆ ತೃಪ್ತಿಪಡಿಸುವ ಕೆಲಸ ಮಾಡುತ್ತಿದ್ದೇವೆ’ ಎಂದು ಅಲ್ಲಿನ ಸಿಬ್ಬಂದಿ ಹೇಳುತ್ತಾರೆ.
ಎಸ್ಬಿಐ ಗ್ರಾಹಕರ ಸೇವಾ ಕೇಂದ್ರದಲ್ಲಿಯೂ ಹಣ ಇಲ್ಲ. ಜನರು ಗುರುವಾರ ಹಣಕ್ಕಾಗಿ ಎಲ್ಲೆಡೆ ಸುತ್ತಾಡಿದರು ಹಣ ಸಿಗಲಿಲ್ಲ. ಕೊನೆಗೆ ಮಿನಿ ಹಣಕಾಸು ಸಂಸ್ಥೆಗಳಿಂದ ಸಾವಿರಕ್ಕೆ ₹10 ಕಮಿಷನ್ ನೀಡಿ ಹಣ ತರಬೇಕಾಯಿತು’ ಎಂದು ಗ್ರಾಹಕರು ಹೇಳುತ್ತಾರೆ.
‘ಬ್ಯಾಂಕಿನವರು ಮೊಬೈಲ್ ಮೂಲಕ, ಆರ್ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡಿ ಎಂದು ಹೇಳುತ್ತಾರೆ. ಆದರೆ ಗ್ರಾಮಾಂತರ ಭಾಗದಲ್ಲಿ ಅದು ಸಾಧ್ಯವಾಗುವುದಿಲ್ಲ. ಜನರು ಇನ್ನೂ ಆ ವ್ಯವಸ್ಥೆಗೆ ಹೊಂದಿಕೊಂಡಿಲ್ಲ. ಜನರು ಕೈಗೆ ಹಣ ಕೇಳುತ್ತಾರೆ. ಮೇಲಿಂದ ಮೇಲೆ ವಿದ್ಯುತ್ ಕೈಕೊಡುತ್ತದೆ. ಸರ್ವರ್ ಹೋಗಿಬಿಡುತ್ತದೆ. ಇದೆಲ್ಲ ಕಾರಣದಿಂದಾಗಿ ಬಡವರು ತಾವು ಠೇವಣಿ ಮಾಡಿದ ಹಣವನ್ನು ಸಕಾಲದಲ್ಲಿ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಗ್ರಾಹಕರು ಆರೋಪಿಸಿದರು.
ಬ್ಯಾಂಕುಗಳ ರಾಷ್ಟ್ರೀಕರಣದಿಂದಾಗಿ ಪ್ರತಿ ಗ್ರಾಮಾಂತರ ಭಾಗದಲ್ಲಿ ಬ್ಯಾಂಕುಗಳು ಸ್ಥಾಪನೆಯಾಗಿವೆ. ಆದರೆ ಸರಿಯಾದ ಕಟ್ಟಡಗಳು, ಎಟಿಎಂ ವ್ಯವಸ್ಥೆ ಇಲ್ಲ. ಸರ್ಕಾರದ ಕಾರ್ಯಕ್ರಮಗಳನ್ನು ಸರಿಯಾಗಿ ಜಾರಿಗೊಳಿಸುತ್ತಿಲ್ಲ. ವಿವಿಧ ಇಲಾಖೆಗಳ ಯೋಜನೆಗಳನ್ನು ಬ್ಯಾಂಕುಗಳು ಅನುಷ್ಠಾನ ಮಾಡುತ್ತಿಲ್ಲ. ಫಲಾನುಭವಿಗಳಿಗೆ ಸಹಾಯಧನದಲ್ಲಿ ಯೋಜನೆಗಳು ಮಂಜೂರಾದರೆ ಅವರಿಗೆ ಕೇವಲ ಸಹಾಯಧನ ನೀಡಿ ಸಾಲ ಕೊಡದೆ ಮೋಸ ಮಾಡುತ್ತಾರೆ’ ಎಂದು ಪಶು ಭಾಗ್ಯ ಯೋಜನೆಯ ಫಲಾನುಭವಿ ಖಾಜಪ್ಪ ಸಕ್ಕರೆ ಆರೋಪಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.