ಕಲಬುರಗಿ: ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಂದ ಸಿಐಡಿ ಅಧಿಕಾರಿಗಳು ಒಟ್ಟಾರೆ ₹ 11 ಲಕ್ಷಕ್ಕೂ ಅಧಿಕ ನಗದು ವಶಪಡಿಸಿಕೊಂಡಿದ್ದು, ಅದರಲ್ಲಿ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಅವರೊಬ್ಬರಿಂದಲೇ ₹ 3.60 ಲಕ್ಷ ಹಣವನ್ನು ಜಪ್ತಿ ಮಾಡಿದ್ದಾರೆ.
ಅಲ್ಲದೇ, ಪ್ರಮುಖ ಆರೋಪಿಗಳಾಗಿರುವ ಅಫಜಲಪುರದ ಆರ್.ಡಿ. ಪಾಟೀಲ ಅವರ ಇನ್ನೋವಾ ಕಾರು ಹಾಗೂ ದಿವ್ಯಾ ಹಾಗರಗಿ, ಮಲ್ಲಿಕಾರ್ಜುನ ಬಿದನೂರ, ಮಂಜುನಾಥ ಮೇಳಕುಂದಿ, ಲೆಕ್ಕ ಪರಿಶೋಧಕ ಚಂದ್ರಕಾಂತ ಕುಲಕರ್ಣಿ ಅವರಿಗೆ ಸೇರಿದ ಕಾರುಗಳನ್ನು ಜಪ್ತಿ ಮಾಡಿದ್ದಾರೆ.
ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಕಾಶಿನಾಥ ಚಿಲ್, ಜಿಲ್ಲಾ ಪೊಲೀಸ್ ಇಲಾಖೆ ಬೆರಳಚ್ಚು ವಿಭಾಗದ ಸಿಪಿಐ ಆಗಿದ್ದ ಆನಂದ ಮೇತ್ರಿ, ಅಫಜಲಪುರ ಶಾಸಕ ಎಂ.ವೈ. ಪಾಟೀಲ ಅವರ ಗನ್ಮ್ಯಾನ್ ಆಗಿದ್ದ ಹಯ್ಯಾಳಿ ದೇಸಾಯಿ, ರುದ್ರಗೌಡ ಪಾಟೀಲ, ಸೊಲ್ಲಾಪುರದ ಮರಳು ಉದ್ಯಮಿ ಸುರೇಶ ಕಾಟೇಗಾಂವ ಸೇರಿದಂತೆ ಇತರರಿಂದ ₹ 11 ಲಕ್ಷ ಹಣ ಜಪ್ತಿ ಮಾಡಿದ್ದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಆರ್.ಡಿ. ಪಾಟೀಲಗೆ ಸೇರಿದ ಕಲಬುರಗಿಯ ಆಕ್ಸಿಸ್ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾದ ಖಾತೆಗಳು ಹಾಗೂ ಲಾಕರ್ಗಳನ್ನು ಬಳಕೆ ಮಾಡದಂತೆ ನಿರ್ಬಂಧ ವಿಧಿಸಿದ್ದಾರೆ. ಖಾತೆಯಲ್ಲಿ ₹ 38 ಲಕ್ಷ ನಗದು ಹಾಗೂ ಲಾಕರ್ನಲ್ಲಿ ಅರ್ಧ ಕೆ.ಜಿ. ಚಿನ್ನ ಇರುವುದನ್ನು ಪತ್ತೆ ಹಚ್ಚಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.