
ಚಿತ್ತಾಪುರ: ತಾಲ್ಲೂಕಿನ ಸೂಲಹಳ್ಳಿ ಸಮೀಪ ಸ್ಥಾಪನೆ ಮಾಡಿರುವ ಶ್ರೀ ಸಿಮೆಂಟ್ ಕಂಪನಿಯ ಕ್ಲಿಂಕರ್ ಘಟಕದಿಂದ ದೂಳು ಹರಡಿ ಬೆಳೆ ಹಾನಿಯಾಗಿದೆ. ಪರಿಹಾರ ನೀಡಬೇಕು ಹಾಗೂ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಜ.23 ರಿಂದ ನಡೆಯುತ್ತಿದ್ದ ಪ್ರತಿಭಟನೆಗೆ ಕಂಪನಿ ಆಡಳಿತ ಬುಧವಾರ ರಾತ್ರಿ ಸ್ಪಂದಿಸಿದ್ದರಿಂದ ರೈತರು ರಾತ್ರಿ 8 ಗಂಟೆಗೆ ಹೋರಾಟ ಕೈಬಿಟ್ಟಿದ್ದಾರೆ.
ರೈತರು ಕಂಪನಿ ರಸ್ತೆಯಲ್ಲಿ ಕುಳಿತು ಸಂಚಾರ ಬಂದ್ ಮಾಡಿ ಮಂಗಳವಾರದಿಂದ ಅಹೋರಾತ್ರಿ ಧರಣಿ ಆರಂಭಿಸಿದ್ದರು. ರೈತರ ಹೋರಾಟದ ಬಿಸಿ ತಟ್ಟಿದ್ದರಿಂದ ಸೇಡಂ ತಾಲ್ಲೂಕಿನ ಕೊಡ್ಲಾ ಹತ್ತಿರದ ಶ್ರೀ ಸಿಮೆಂಟ್ ಕಂಪನಿಯ ಘಟಕದ ಮುಖ್ಯಸ್ಥ ರಾಜೇಶ್ ವಿಜಯ ಅವರು ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರಿಂದ ರೈತರು ಹೋರಾಟ ಹಿಂದಕ್ಕೆ ಪಡೆಯಲು ಒಪ್ಪಿಕೊಂಡರು.
ಬೆಳೆ ಹಾನಿ ಪರಿಹಾರ, ಹಾಣಾದಿ ರಸ್ತೆ ನಿರ್ಮಾಣ, ಸಿಮೆಂಟ್ ಕಾಂಕ್ರಿಟ್ ಚರಂಡಿ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದ್ದರಿಂದ ಹೋರಾಟ ಕೈಬಿಟ್ಟಿದ್ದೇವೆ ಎಂದು ರೈತರಾದ ರಮೇಶ ಬೊಮ್ಮನಳ್ಳಿ, ನಾಗರಾಜ ರೇಷ್ಮೀ, ಮಲ್ಲಿಕಾರ್ಜುನರೆಡ್ಡಿ ಆಲೂರ್ ಅವರು ಹೇಳಿದರು.
ತುರ್ತು ಕಾಮಗಾರಿ: ರೈತರ ಬೇಡಿಕೆಯಂತೆ ಹೊಲಗಳ ಪಕ್ಕದಲ್ಲಿ ಸಿಮೆಂಟ್ ಕಾಂಕ್ರಿಟ್ ಚರಂಡಿ ನಿರ್ಮಾಣ ಕಾಮಗಾರಿ, ಹಾಣಾದಿ ಹಾದು ಹೋಗುವ ಕಡೆಗೆಲ್ಲ ಸಿಮೆಂಟ್ ರಸ್ತೆ ನಿರ್ಮಾಣ ವಾರದೊಳಗೆ ಶುರು ಮಾಡುತ್ತೇವೆ. ಬೆಳೆಗಳ ರಾಶಿಯ ನಂತರ ಸಿಮೆಂಟ್ ಘಟಕದಿಂದ ಚೌಕಿ ತಾಂಡಾದವರೆಗೆ ಹಾಣಾದಿ ರಸ್ತೆ ನಿರ್ಮಾಣ ಕಾಮಗಾರಿ ಮಳೆಗಾಲಕ್ಕೂ ಮುಂಚೆ ಮುಗಿಸುತ್ತೇವೆ. ಸೂಲಹಳ್ಳಿ ಮತ್ತು ಆಲೂರು ಗ್ರಾಮಗಳ ಹಾಣಾದಿ ನಿರ್ಮಾಣ ಮಾಡುತ್ತೇವೆ ಎಂದು ಕಂಪನಿ ಅಧಿಕಾರಿ ರೈತರಿಗೆ ಭರವಸೆ ನೀಡಿದರು.
ಈ ವೇಳೆ ಸಿದ್ರಾಮಪ್ಪ ಯು.ರೇಷ್ಮೀ, ಸಿದ್ರಾಮಪ್ಪ ವಿ.ರೇಷ್ಮೀ, ಶರಣಗೌಡ ಹೊನ್ನಾಳ, ಅಂಬರೀಷ್ ಬೋವಿ, ರವಿ ಗಂಗಾಣಿ, ಗ್ರಾಮ ಆಡಳಿತಧಿಕಾರಿ ಮೈನೋದ್ದಿನ್ ಹಾಗೂ ಕಂಪೆನಿಯ ವಿವಿಧ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.