ಆಳಂದ: ನೆರೆಯ ಮಹಾರಾಷ್ಟ್ರದಲ್ಲಿ ಸೆಮಿ ಲಾಕ್ಡೌನ್ ಜಾರಿಗೊಳಿಸಿದ ಕಾರಣ ಮಹಾರಾಷ್ಟ್ರದಿಂದ ಅಧಿಕ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿರುವುದರಿಂದ ಗಡಿ ತಪಾಸಣಾ ಕೇಂದ್ರಗಳಲ್ಲಿ ಕಟ್ಟೆಚ್ಚೆರವಹಿಸಲಾಗಿದೆ.
ತಾಲ್ಲೂಕಿನ ಹಿರೋಳಿ, ನಿಂಬಾಳ ಹಾಗೂ ಖಜೂರಿ ಗ್ರಾಮದ ಗಡಿಯಲ್ಲಿ ಈಗಾಗಲೇ ತಪಾಸಣೆ ಕೇಂದ್ರ ತೆರೆಯಲಾಗಿದೆ. ನೆರೆಯ ಮಹಾರಾಷ್ಟ್ರದಿಂದ ಆಗಮಿಸುವ ವಾಹನಗಳ ತಪಾಸಣೆ ಸೇರಿದಂತೆ ಕೋವಿಡ್ ವರದಿ ಪರಿಶೀಲನೆ ಕಾರ್ಯವು ಮುಂದುವರಿದಿದೆ.
ಏ.15ರಿಂದ ಮಹಾರಾಷ್ಟ್ರದಲ್ಲಿ ಸೆಮಿ ಲಾಕ್ಡೌನ್ ವಿಧಿಸಿದ ಪರಿಣಾಮ ರಾತ್ರಿ ಪ್ರಯಾಣಿಕರು ಆಗಮಿಸುವ ನಿರೀಕ್ಷೆ ಇದೆ. ಆದರೆ ಬುಧವಾರ ಸಂಜೆವರೆಗೂ ಕೇವಲ 18 ವಾಹನಗಳು ಮಾತ್ರ ಮಹಾರಾಷ್ಟ್ರದ ಪುಣೆ, ಮುಂಬೈ ಪಟ್ಟಣದಿಂದ ಆಗಮಿಸಿವೆ ಎಂದು ಕಿರಿಯ ಆರೋಗ್ಯ ಸಹಾಯಕ ಬಾಬು ರಾಠೋಡ ತಿಳಿಸಿದರು.
ಯುಗಾದಿ ಹಬ್ಬ ಸೇರಿದಂತೆ ವಿವಿಧೆಡೆ ಜಾತ್ರೆ ಹಾಗೂ ರಂಜಾನ್ ಮಾಸದ ಆರಂಭದ ಕಾರಣ ಸಹಜವಾಗಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವರು. ಆದರೆ ಈ ಹಿಂದಿನ ಲಾಕ್ಡೌನ್ ದಂತೆ ಕಠಿಣ ಕಟ್ಟೆಚ್ಚೆರ ಕ್ರಮಗಳು ಮಹಾರಾಷ್ಟ್ರ ಸರ್ಕಾರ ತೆಗೆದುಕೊಂಡಿಲ್ಲ. ಜನದಟ್ಟಣೆ ಹಾಗೂ ಸಭೆ, ಸಮಾರಂಭ ಹಾಗೂ ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಲಾಗಿದೆ. ಹೀಗಾಗಿ ಮೊದಲಿನಂತೆ ಕೂಲಿಕಾರ್ಮಿಕರು ವಲಸೆ ಬರುವದು ಆಗಲಾರದು ಎಂದು ನೆರೆಯ ವಾಗ್ದರಿಯ ಶಿಕ್ಷಕ ಶಿವಾನಂದ ಗೋಗಾಂವ ‘ಪ್ರಜಾವಾಣಿ’ಗೆ ತಿಳಿಸಿದರು.
ನೆರೆ ಮಹಾರಾಷ್ಟ್ರದಿಂದ ಆಗಮಿಸುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಆರ್ಟಿಪಿಸಿಆರ್ ವರದಿ ಪರಿಶೀಲನೆ ಸೇರಿದಂತೆ ಅಗತ್ಯ ಮಾಹಿತಿ ಸಂಗ್ರಹಿಸಲು ಹಿರೋಳಿ ಹಾಗೂ ನಿಂಬಾಳ ಗಡಿ ಕೇಂದ್ರದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಮಾದನಹಿಪ್ಪರಗಾ ಪಿಎಸ್ಐ ಇಂದುಮತಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.