ADVERTISEMENT

ಶಾಲಾವಾಹನ ಹಾಯ್ದು ಬಾಲಕಿ ಸಾವು

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2022, 4:47 IST
Last Updated 18 ನವೆಂಬರ್ 2022, 4:47 IST
ಮನಸ್ವಿನಿ
ಮನಸ್ವಿನಿ   

ಗುರುಮಠಕಲ್ (ಯಾದಗಿರಿ ಜಿಲ್ಲೆ): ಶಾಲೆಯಿಂದ ಮಕ್ಕಳನ್ನು ಮನೆಗೆ ಬಿಡಲು ತೆರಳಿದ್ದ ಖಾಸಗಿ ಶಾಲಾ ವಾಹನ ಹಾಯ್ದು 2 ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ನಡೆದಿದೆ.

ಪಟ್ಟಣದ ಲಕ್ಷ್ಮಿನಗರ ಬಡಾವಣೆಯ ನಿವಾಸಿ ವೆಂಕಟಪ್ಪ ಪುತ್ರಿ ಮನಸ್ವಿನಿ (2) ಮೃತಪಟ್ಟ ಬಾಲಕಿ.

ಪಟ್ಟಣದ ಫ್ರಂಟ್ ಲೈನ್ ಶಾಲೆಯ ವಾಹನದ ಚಾಲಕನ ನಿರ್ಲಕ್ಷ್ಯತನದಿಂದ ಅವಘಡ ಸಂಭವಿಸಿದೆ ಎಂದು ಬಾಲಕಿಯ ಸೋದರಮಾವ ವೆಂಕಟೇಶ ನಿಂಗವೋಳ ಆರೋಪಿಸಿದರು.

ADVERTISEMENT

ಘಟನೆ: ಗುರುವಾರ ಸಂಜೆ ಅದೇ ಶಾಲಾ ಬಸ್‌ನಿಂದ ಪುತ್ರ ಭುವನನನ್ನು ಕರೆತರಲು ಬಾಲಕಿಯ ಸೋದರತ್ತೆ ಸುಧಾರಾಣಿ ತೆರಳಿದ್ದರು. ಅವರೊಂದಿಗೆ ಬಾಲಕಿಯೂ ರಸ್ತೆಯಲ್ಲಿದ್ದಳು. ಚಾಲಕ ಸರಿಯಾಗಿ ಗಮನಿಸದೆ ವೇಗವಾಗಿ ವಾಹನ ಚಲಾಯಿಸಿದ್ದು, ಬಾಲಕಿಯ ಮೇಲೆ ಬಸ್ ಚಕ್ರ ಹತ್ತಿದೆ. ಇದರಿಂದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ವೆಂಕಟೇಶ ತಿಳಿಸಿದರು.

ಪ್ರತಿನಿತ್ಯ ಬರುವ ಚಾಲಕನ ಬದಲಿಗೆ ಗುರುವಾರ ಹೊಸ ಚಾಲಕ ಬಂದಿದ್ದಾನೆ. ಶಾಲಾ ಬಸ್‌ನಲ್ಲಿ ಇನ್ನೊಬ್ಬ ಸಹಾಯಕನ್ನು ನೇಮಕ ಮಾಡಿಕೊಳ್ಳದ ಸಂಸ್ಥೆಯ ಹಾಗೂ ಮಕ್ಕಳನ್ನು ಗಮನಿಸದಂತೆ ಚಲಾಯಿಸಿದ ಚಾಲಕನ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಲಕ್ಷ್ಮಿನಗರ ಬಡಾವಣೆಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.