ಘಟನೆ ನಡೆದ ಸಂದರ್ಭ
ರಾಯಚೂರು: ಫೋಟೊ ತೆಗೆಯುವ ನೆಪದಲ್ಲಿ ಗಂಡನನ್ನು ಕೃಷ್ಣಾ ನದಿಗೆ ತಳ್ಳಿದ್ದ ಆರೋಪ ಹೊತ್ತಿರುವ ಬಾಲಕಿಯ ಪತಿ ಸೇರಿ ಮೂವರ ವಿರುದ್ಧ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
ಶಕ್ತಿ ನಗರದ ನಿವಾಸಿ ತಾತಪ್ಪ (ಬಾಲಕಿಯ ಪತಿ), ಅತ್ತೆ ಗದ್ದೆಮ್ಮ ಹಾಗೂ ಯಾದಗಿರಿ ಜಿಲ್ಲೆಯ ಹುಣಸಗಿಯ ಸುಮಂಗಲಾ ವಿರುದ್ಧ ದೇವಸುಗೂರು ಪಿಡಿಒ ದೂರು ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ಪತಿ, ಸಂಬಂಧಪಟ್ಟವರ ವಿರುದ್ಧ ಬಾಲ್ಯವಿವಾಹ, ಪೋಕ್ಸೊ ಅಡಿ ಪ್ರಕರಣ ದಾಖಲಿಸುವಂತೆ ರಾಯಚೂರು ಡಿಸಿಪಿಒಗೆ ಯಾದಗಿರಿ ಡಿಸಿಪಿಒ ಪತ್ರ ಬರೆದಿದ್ದರು.
‘ತಾತಪ್ಪ ಹಾಗೂ ಸಬಂಧಪಟ್ಟವರ ವಿರುದ್ಧ ಬಾಲ್ಯವಿವಾಹ ನಿಷೇಧ ಕಾಯ್ದೆ ಅಡಿಯಲ್ಲಿ ಮಾತ್ರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾತಪ್ಪ ಅವರು ಕೆಲ ದಿನಗಳ ಕಾಲ ಅಪ್ರಾಪ್ತೆಯ ಜೊತೆ ಕಾಲ ಕಳೆದಿದ್ದು, ಪೋಕ್ಸೊ ಅಡಿಯಲ್ಲಿಯೂ ಪ್ರಕರಣ ದಾಖಲು ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಳ್ಳಲು ನಿರ್ಧರಿಸಿದೆ’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.