ಕಲಬುರ್ಗಿ: ‘ಮಕ್ಕಳ ಸಂರಕ್ಷಣೆ ಮತ್ತು ಹಕ್ಕುಗಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಚೈಲ್ಡ್ಲೈನ್ ಸಹಾಯವಾಣಿ ಕೇಂದ್ರದ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಹೇಳಿದರು.
ಮಂಗಳವಾರ ನಡೆದ ಚೈಲ್ಡ್ಲೈನ್ನ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
‘ಅಂಗನವಾಡಿ ಮತ್ತು ಶಾಲೆ ಗೋಡೆಗಳ ಮೇಲೆ ಈ ಬಗ್ಗೆ ಜಾಗೃತಿ ಮೂಡಿಸುವ ಚಿತ್ರಗಳನ್ನು ಬಿಡಿಸಬೇಕು. ಇದಕ್ಕೆ ತಗಲುವ ವೆಚ್ಚವನ್ನು ಆಯಾ ಶಾಲೆಯ ಎಸ್ಡಿಎಂಸಿ ಅನುದಾನದಿಂದ ಭರಿಸಬೇಕು. ಆಳಂದ ರಸ್ತೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀನದ ರಾಜ್ಯ ಮಹಿಳಾ ವಸತಿ ನಿಲಯ, ಸರ್ಕಾರಿ ಬಾಲಕಿಯರ ಬಾಲ ಮಂದಿರ, ಅಮೂಲ್ಯ ಶಿಶು ಗೃಹ, ಸರ್ಕಾರಿ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಗೆ ಕೂಡಲೇ ಭೇಟಿ ನೀಡಬೇಕು. ಸಣ್ಣ-ಪುಟ್ಟ ದುರಸ್ತಿ ಕಾಮಗಾರಿ ಅಗತ್ಯವಿದ್ದಲ್ಲಿ ಕೂಡಲೇ ಕೈಗೊಳ್ಳಬೇಕು’ ಎಂದು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
‘ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು ಬಾಲ್ಯ ವಿವಾಹ ನಡೆಯುತ್ತಿರುವ ಬಗ್ಗೆ ಮಾಹಿತಿ ದೊರೆತ ಕೂಡಲೇ ದಾಳಿಯ ನೇತೃತ್ವ ವಹಿಸಿದ ತಂಡದಲ್ಲಿ ಕಡ್ಡಾಯವಾಗಿ ಭಾಗಿಯಾಗಬೇಕು. ಒಂದು ವೇಳೆ ದಾಳಿಯಲ್ಲಿ ಭಾಗವಹಿಸದಿದ್ದಲ್ಲಿ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು’ ಎಂದು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ವಿ.ರಾಮನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ ಮಾತನಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಾಂತಗೌಡ ಪಾಟೀಲ, ಚೈಲ್ಡ್ಲೈನ್ ನೋಡಲ್ ಅಧಿಕಾರಿ ಡಾ.ಲಿಂಗರಾಜ ಕೋಣಿನ, ಡಾನ್ ಬಾಸ್ಕೊ ಸಂಸ್ಥೆಯ ಫಾದರ್ ಸಜಿತ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಅಧಿಕಾರಿ ಭರತೇಶ ಶೀಲವಂತ ಇದ್ದರು.
ಅಂಕಿ–ಅಂಶ
ಚೈಲ್ಡ್ಲೈನ್ ಸಹಾಯವಾಣಿ
* 1,049 2017–18ರಲ್ಲಿ ಸ್ವೀಕೃತ ಕರೆಗಳು
* 4712018–18ರಲ್ಲಿ ಸ್ವೀಕೃತ ಕರೆಗಳು
* 69 ಬಾಲ್ಯ ವಿವಾಹ ಕಾಯ್ದೆಯಡಿ ದಾಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.