ಚಿತ್ತಾಪುರ( ಕಲಬುರಗಿ ಜಿಲ್ಲೆ): ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆ ಮತ್ತು ವಿವಿಧ ಜಲಾಶಯಗಳ ನೀರು ಬಿಟ್ಟಿದ್ದರಿಂದ ತಾಲ್ಲೂಕಿನ ದಂಡೋತಿ ಸಮೀಪ ಹರಿಯುವ ಕಾಗಿಣಾ ನದಿಗೆ ಮಧ್ಯರಾತ್ರಿ ಭಾರಿ ಪ್ರವಾಹ ಬಂದು ಸೇತುವೆ ಮುಳುಗಡೆಯಾಗಿದೆ. ಈ ಮಾರ್ಗದ ಸಾರಿಗೆ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿದೆ.
ದಂಡೋತಿ ಸೇತುವೆ ಮುಳುಗಡೆಯಿಂದಾಗಿ ಈ ಸೇತುವೆ ಮಾರ್ಗವಾಗಿ ಕಲಬುರಗಿಗೆ ಸಂಚರಿಸುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಶಹಾಬಾದ್ ಮಾರ್ಗಕ್ಕೆ ಬದಲಾಯಿಸಲಾಗಿದೆ. ಸೇಡಂ ನಗರಕ್ಕೆ ಸಂಚರಿಸುತ್ತಿದ್ದ ಬಸ್ ಸಂಚಾರ ಮಳಖೇಡ ಮಾರ್ಗಕ್ಕೆ ಬದಲಾಯಿಸಲಾಗಿದೆ. ಚಿತ್ತಾಪುರ-ಕಾಳಗಿ ನಡುವಿನ ಸಂಚಾರ ಸಂಪೂರ್ಣ ಬಂದ್ ಆಗಿದೆ.
ದಂಡೋತಿ ಸೇತುವೆ ಮುಳುಗಡೆಯಿಂದಾಗಿ ದಂಡೋತಿ, ಮಲಕೂಡ, ತೊನಸನಹಳ್ಳಿ ಮುಂತಾದ ಗ್ರಾಮಗಳಿಂದ ಚಿತ್ತಾಪುರ ಪಟ್ಟಣದಲ್ಲಿನ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಹಾಗೂ ಪಿಯುಸಿ, ಪದವಿ, ಡಿಇಡಿ, ಬಿಇಡಿ ಕಾಲೇಜುಗಳಿಗೆ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರಲು ಸಾಧ್ಯವಾಗದೆ ಪರದಾಡಿದರು.
ಕಾಗಿಣಾ ನದಿ ಪಾತ್ರದ ಮೇಲ್ಭಾಗದಲ್ಲಿ ಭಾರಿ ಮಳೆಯಾಗಿದ್ದರಿಂದ ಹಾಗೂ ಕಾಳಗಿ ತಾಲ್ಲೂಕಿನ ಬೆಣ್ಣೆತೊರಾ ಜಲಾಶಯದಿಂದ 55,000 ಕ್ಯೂಸೆಕ್ ನೀರು ಹೊರಗೆ ಬಿಟ್ಟಿದ್ದರಿಂದ ಬೆಣ್ಣೆತೊರಾ ನದಿಯ ನೀರು ಮತ್ತು ಚಿಂಚೋಳಿ ತಾಲ್ಲೂಕಿನ ನಾಗರಾಳ ಜಲಾಶಯದಿಂದ ನೀರು ಬಿಟ್ಟಿದ್ದರಿಂದ ಕಾಗಿಣಾ ನದಿಯು ಪ್ರವಾಹದಿಂದ ತುಂಬಿ ಅಪಾಯಮಟ್ಟ ಮೀರಿ ಭೋರ್ಗರೆಯುತ್ತಿದೆ.
ನದಿಯು ತನ್ನ ಸರಹದ್ದು ಮೀರಿ ನದಿ ದಂಡೆಯ ಹೊಲಗಳಿಗೆ ನುಗ್ಗಿ ಹರಿಯುತ್ತಿದೆ. ಪ್ರವಾಹ ಏರುಗತಿಯಲ್ಲಿದ್ದು ಕ್ಷಣಕ್ಷಣಕ್ಕೂ ಪ್ರವಾಹ ಮಟ್ಟ ಹೆಚ್ಚುತ್ತಿದೆ.
ತಾಲ್ಲೂಕಿನ ಮುಡಬೂಳ, ಕದ್ದರಗಿ, ಶಂಕರವಾಡಿ ಸಮೀಪ ಕಾಗಿಣಾ ನದಿಗೆ ಕಟ್ಟಿರುವ ಬಾಂದಾರು ಸೇತುವೆಗಳು ಪ್ರವಾಹದಲ್ಲಿ ಮುಳುಗಡೆಯಾಗಿವೆ. ಕದ್ದರಗಿ ಸಮೀಪದ ಸೇತುವೆ ಮುಳುಗಡೆಯಾಗಿದ್ದರಿಂದ ಈ ಮಾರ್ಗದ ಚಿತ್ತಾಪುರ- ಶಹಾಬಾದ್ ತಾಲ್ಲೂಕುಗಳು ಸಂಪರ್ಕಕಡಿದುಕೊಂಡಿವೆ. ಇವಣಿ ಸಮೀಪದ ಹಳ್ಳಕ್ಕೆ ಪ್ರವಾಹ ಉಕ್ಕಿ ಬಂದು ಹಳ್ಳಕ್ಕೆ ಕಟ್ಟಿರುವ ಸೇತುವೆ ಮುಳುಗಡೆಯಾಗಿ ಸಂಚಾರ ಬಂದ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.