ಕಲಬುರ್ಗಿ: ಗ್ರಾಮೀಣ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ನಗರ ಪೊಲೀಸ್ ಕಮಿಷನರ್ ಡಾ.ವೈ.ಎಸ್. ರವಿಕುಮಾರ ಅವರು ಸಮೀಪದ ಪಟ್ಟಣ ಗ್ರಾಮದಲ್ಲಿ ಶುಕ್ರವಾರ ಗ್ರಾಮ ವಾಸ್ತವ್ಯ ಮಾಡಿದರು.
‘ಯಾವುದೇ ಸಮಸ್ಯೆ ಇದ್ದರೂ ಜನರು ಪೊಲೀಸ್ ಠಾಣೆಗಳಿಗೆ ಬಂದು ಬಗೆಹರಿಸಿಕೊಳ್ಳಬೇಕು. ಪೊಲೀಸ್ ವ್ಯವಸ್ಥೆ ಈಗ ಜನಸ್ನೇಹಿಯಾಗಿದೆ. ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು. ತಂಟೆ– ತಕರಾರು, ಅಪರಾಧ ಕೃತ್ಯಕ್ಕೆ ಅವಕಾಶ ಮಾಡಿಕೊಡದ ಮಾರ್ಗ ಅನುಸರಿಸಿ’ ಎಂದು ಅವರು ಗ್ರಾಮಸ್ಥರಲ್ಲಿ ಕೋರಿದರು.
ಇದೇ ವೇಳೆ ಹಲವುರೈತರು, ಗ್ರಾಮದ ಮುಖಂಡರು, ಮಹಿಳೆಯರು ತಮ್ಮ ಸಮಸ್ಯೆ ಹೇಳಿಕೊಂಡರು. ಗ್ರಾಮಸ್ಥರು ನೀಡಿದ ಮನವಿಗಳನ್ನು ಪಡೆದ ರವಿಕುಮಾರ ಕೆಲವರಿಗೆ ಸ್ಥಳದಲ್ಲೇ ಪರಿಹಾರ ಹೇಳಿದರು. ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಕುಡಿಯುವ ಶುದ್ಧ ನೀರು, ರಸ್ತೆ ದುರಸ್ತಿ ಮುಂತಾದ ಸಮಸ್ಯೆಗಳ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಲೀಶ್ ಶಶಿ ಅವರ ಗಮನ ಸೆಳೆದರು.
ಇದಕ್ಕೂ ಮುನ್ನ ಗ್ರಾಮದಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಅವರು, ಗ್ರಾಮ ದೇವತೆ ದೇವಾಲಯಕ್ಕೆ ಭೇಟಿ ನೀಡಿ, ದರ್ಶನ ಪಡೆದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ತೋರದ ನಾಲ್ವರು ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ನಿವೃತ್ತರಾದ ಪಿಎಸ್ಐ ಶರಣಗೌಡ, ರಾಚಣ್ಣ, ಅಪ್ಪರಾವ್ ಅವರನ್ನು ಸನ್ಮಾನಿಸಿದರು.
ಡಿಸಿಪಿ ಶ್ರೀನಿವಾಸಲು, ಶ್ರೀಕಾಂತ ಕಟ್ಟಿಮನಿ, ಎಸಿಪಿ ಅಕ್ಷಯಕುಮಾರ, ಜೆ.ಎಚ್.ಇನಾಂದಾರ್,ಇನ್ಸ್ಪೆಕ್ಟರ್ ಭಾಸು ಚವ್ಹಾಣ ಹಾಗೂ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.