ADVERTISEMENT

‘ಬಂಡಾಯದ ದನಿ’ ಅಂತಿಮ ನಮನ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 9:02 IST
Last Updated 30 ಜೂನ್ 2020, 9:02 IST
ಕಲಬುರ್ಗಿಯಲ್ಲಿ ಸೋಮವಾರ ಸಂಸದ ಡಾ.ಉಮೇಶ ಜಾಧವ ಅವರು ಗೀತಾ ನಾಗಭೂಷಣ ಅವರ ಅಂತಿಮ ದರ್ಶನ ಪಡೆದರು
ಕಲಬುರ್ಗಿಯಲ್ಲಿ ಸೋಮವಾರ ಸಂಸದ ಡಾ.ಉಮೇಶ ಜಾಧವ ಅವರು ಗೀತಾ ನಾಗಭೂಷಣ ಅವರ ಅಂತಿಮ ದರ್ಶನ ಪಡೆದರು   

ಕಲಬುರ್ಗಿ: ಜಿಲ್ಲೆಯ ಹಿರಿಯ ಸಾಹಿತಿ ಗೀತಾ ನಾಗಭೂಷಣ ಅವರ ಅಗಲಿಕೆ ಹಿನ್ನೆಲೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಸಾಹಿತ್ಯಾಭಿಮಾನಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಕಂಬನಿ ಮಿಡಿದರು. ಕಲಬುರ್ಗಿಯಲ್ಲಿನ ಅವರ ನಿವಾಸದಲ್ಲಿ ಸೋಮವಾರ ಬೆಳಿಗ್ಗೆ ಗಣ್ಯಮಾನ್ಯರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಗೀತಾ ನಾಗಭೂಷಣ ಅವರ ಮನೆಗೆ ತೆರಳಿ ಮಾಲಾರ್ಪಣೆ ಮಾಡಿ ಸಂಸದ ಡಾ.ಉಮೇಶ ಜಾಧವ ಅವರು, ಕುಟುಂಬದ ಸದಸ್ಯರಿಗೆ ದೈರ್ಯ ಹೇಳಿದರು. ಶಾಸಕ ಡಾ.ಅಜಯ ಸಿಂಗ್‌, ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ, ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಮಾಜಿ ಸಚಿವ ಕೆ.ಬಿ.ಶಾಣಪ್ಪ, ಹೋರಾಟಗಾರರಾದ ಮೀನಾಕ್ಷಿ ಬಾಳಿ, ಹಿರಿಯ ಕಲಾವಿದ ವಿ.ಜಿ. ಅಂದಾಣಿ, ಕೆ.ನೀಲಾ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ಸಿಂ‍ಪಿ, ವಿಶ್ವಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಸುರೇಶ ಬಡಿಗೇರ್‌ ಮುಂತಾದವರು ಕುಟುಂಬಕ್ಕೆ ಸಾಂತ್ವನ ಹೇಳಿದರು.

‘ತುಳಿತಕ್ಕೊಳಗಾದವರ ಪರ ಕೇಳಿಬರುವ ಗಟ್ಟಿ ಧ್ವನಿಗಳಲ್ಲಿ ಗೀತಾ ನಾಗಭೂಷಣ ಅವರದೂ ಒಂದು. ಕಲ್ಯಾಣ ಕರ್ನಾಟಕ ಭಾಗದ ಮುಂಚೂಣಿ ಸಾಹಿತಿಗಳಲ್ಲಿ ಅವರು ಪ್ರಭಾವಿ ಆಗಿದ್ದಾರೆ. ಹಲವು ಸಾಹಿತ್ಯ ಕಾರ್ಯಕ್ರಮಗಳಲ್ಲಿ ಅವರನ್ನು ಮುಖತಃ ಭೇಟಿ ಮಾಡಿದ್ದೇನೆ. ವಿನಮ್ರ ಸ್ವಭಾವದವರಾದ ಗೀತಾ ಅವರದು, ಹರಿತವಾದ ಬರವಣಿಗೆಯಿಂದ ಬೆಳಕಿಗೆ ಬಂದವರು’ ಎಂದು ಡಾ.ಉಮೇಶ ಜಾಧವ ಸ್ಮರಿಸಿದರು.

ADVERTISEMENT

ಇದಕ್ಕೂ ಮುನ್ನ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹಾಗೂ ಮುಖಂಡರು ಶ್ರದ್ಧಾಂಜಲಿ ಸಭೆ ನಡೆಸಿ, ಕಂಬನಿ ಮಿಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.