ಚಿತ್ತಾಪುರ: ‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹಿಂದೆ ಚಹಾ ಮಾರಾಟ ಮಾಡುತ್ತಿದ್ದ ರೈಲು ನಿಲ್ದಾಣ ಕಟ್ಟಿಸಿದ್ದು, ಸಂಸದ ಡಾ.ಉಮೇಶ ಜಾಧವ ಅವರು ವಂದೇ ಭಾರತ ರೈಲು ಓಡಿಸಿದ್ದ ಹಳಿ ಹಾಕಿಸಿದ್ದು ಕಾಂಗ್ರೆಸ್ ಸರ್ಕಾರ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಗೆ ತಿರುಗೇಟು ನೀಡಿದರು.
ಮತಕ್ಷೇತ್ರದ ದಂಡೋತಿ ಮತ್ತು ಇವಣಿ ಗ್ರಾಮಗಳಲ್ಲಿ ಗುರುವಾರ ಸಂಜೆ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಪರವಾಗಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
‘ಮೊದಲ ಹಂತದ ಮತದಾನದ ಬಳಿಕ ಮೋದಿಯವರ ಕುರ್ಚಿ ಅಲುಗಾಡುತ್ತಿದೆ. ಸುಳ್ಳು ಮತ್ತು ಅಪಪ್ರಚಾರ ಶುರು ಮಾಡಿದ್ದಾರೆ. ಸಮಾಜದಲ್ಲಿ ಕೋಮು ದ್ವೇಷ ಹರಡಲು ಯತ್ನಿಸುತ್ತಿದ್ದಾರೆ. ಪಿಎಸ್ಐ ನೇಮಕಾತಿ ಹಗರಣದ ಅರೋಪಿಯ ಮನೆಗೆ ಹೋಗಿ ಮತ ಕೇಳಲು, ಆರೋಪಿಗಳ ಜತೆ ಚಿತ್ರ ತೆಗೆಸಿಕೊಳ್ಳಲು ಜಾಧವ ಅವರಿಗೆ ನಾಚಿಯಾಗಬೇಕು’ ಎಂದು ಕಿಡಿಕಾರಿದರು.
‘ಕೋಲಿ ಸಮಾಜಕ್ಕೆ ಖರ್ಗೆ ಅವರಿಂದ ಅನ್ಯಾಯ ಆಗಿದೆ ಎಂದು ಆರೋಪ ಮಾಡುವವರೇ, ಖರ್ಗೆ ಪ್ರಧಾನಿಯಾಗಿದ್ದಾರಾ? ನನ್ನ ಕೈಯಲ್ಲಿ ಎಸ್ಟಿ ಮಾಡುವ ಅಧಿಕಾರ ಇದೆಯಾ? ನೀವು ಜಾಗ ಖಾಲಿ ಮಾಡಿ ಕೋಲಿ ಸಮಾಜವನ್ನು ಹೇಗೆ ಎಸ್ಟಿ ಮಾಡಬೇಕು ಎಂದು ಮಾಡಿಯೇ ತೋರಿಸುತ್ತೇವೆ’ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ, ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ ಮರಗೋಳ, ಮುಖಂಡರಾದ ಶಂಭುಲಿಂಗ ಗುಂಡಗುರ್ತಿ, ರಾಜಶೇಖರ ತಿಮ್ಮನಾಯಕ, ಡಾ.ದಾವೂದ್ ಪಟೇಲ್, ವಿರುಪಾಕ್ಷಪ್ಪ ಗಡ್ಡದ್ ಮಾತನಾಡಿದರು.
ಡಾ.ಪ್ರಭುರಾಜ ಕಾಂತಾ, ಮಹ್ಮದ್ ಇಸಾಕ್ ಸೌದಾಗರ, ಮುನಿಯಪ್ಪ ಕೊಳ್ಳಿ, ರಾಜೇಶ ಗುತ್ತೆದಾರ್, ಸುನಿಲ್ ದೊಡ್ಡಮನಿ, ಅಹ್ಮದ್ ಪಠಾಣ್, ಶಿವಲೀಲಾ ಪಾಳೇದಕರ್, ರಸೀದ್ ಪಠಾಣ್, ನಾಗಯ್ಯ ಗುತ್ತೆದಾರ್, ರೇವಣಸಿದ್ದಪ್ಪ ಕೊಮಚೂರ, ಶಂಕರ ಕೊಳ್ಳಿ, ರಮೇಶ ಕವಡೆ, ಸಂತೋಷ ನಾಟಿಕಾರ, ಮಹೆಬೂಬ್ ಅವದಾನ ಅನೇಕರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.