ADVERTISEMENT

ಪೆಟ್ರೋಲ್ ಹಾಕಿಸಿದವರಿಗೆ ₹ 50ರ ಕೂಪನ್!

ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ನಿಂದ ವಿನೂತನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 6:13 IST
Last Updated 16 ಜೂನ್ 2021, 6:13 IST
ಕಲಬುರ್ಗಿಯ ಪೆಟ್ರೋಲ್ ಬಂಕ್‌ ಬಳಿ ಶಾಸಕ ಪ್ರಿಯಾಂಕ್ ಖರ್ಗೆ ಇಂಧನ ಭರ್ತಿ ಮಾಡಿಸಿಕೊಳ್ಳಲು ಬಂದ ವಾಹನ ಸವಾರರಿಗೆ ₹ 50ರ ಕೂಪನ್ ವಿತರಿಸಿದರು
ಕಲಬುರ್ಗಿಯ ಪೆಟ್ರೋಲ್ ಬಂಕ್‌ ಬಳಿ ಶಾಸಕ ಪ್ರಿಯಾಂಕ್ ಖರ್ಗೆ ಇಂಧನ ಭರ್ತಿ ಮಾಡಿಸಿಕೊಳ್ಳಲು ಬಂದ ವಾಹನ ಸವಾರರಿಗೆ ₹ 50ರ ಕೂಪನ್ ವಿತರಿಸಿದರು   

ಕಲಬುರ್ಗಿ: ಪೆಟ್ರೋಲ್, ಡೀಸೆಲ್ ಮೇಲೆ ವಿಪರೀತ ತೆರಿಗೆ ವಿಧಿಸಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಲು ಬಂದ ಜನರಿಗೆ ₹ 50 ಕೂಪನ್‌ಗಳನ್ನು ನೀಡುವ ಮೂಲಕ ಮಂಗಳವಾರ ವಿನೂತನ ಪ್ರತಿಭಟನೆ ನಡೆಸಿದರು.

ಹೀಗಾಗಿ, ಸಾರ್ವಜನಿಕರು 99ರ ಆಸುಪಾಸಿನಲ್ಲಿದ್ದ ಪ್ರತಿ ಲೀಟರ್‌ಗೆ ₹ 49 ನೀಡಿ ಉಳಿದ ಮೊತ್ತವನ್ನು ಕಾಂಗ್ರೆಸ್ ಕೂಪನ್ ನೀಡಿ ಹಾಕಿಸಿಕೊಂಡರು.

ಕಾಂಗ್ರೆಸ್ ಪಕ್ಷ ತೈಲ ಬೆಲೆ ಹೆಚ್ಚಳ ಖಂಡಿಸಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು, ಸೋಮವಾರ ಸೈಕಲ್ ಮೂಲಕ ಪೆಟ್ರೋಲ್‌ ಪಂಪ್‌ಗೆ ತೆರಳಿ ಪ್ರತಿಭಟನೆ ನಡೆಸಿತ್ತು. ಮಂಗಳವಾರ ಹಳೆ ಜೇವರ್ಗಿ ರಸ್ತೆಯ ಅಂಡರ್‌ಪಾಸ್ ಬಳಿ ಇರುವ ಬಂಕ್‌ ಬಳಿ ಶಾಸಕ ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ನೇತೃತ್ವದಲ್ಲಿ ಸೇರಿದ ಕಾಂಗ್ರೆಸ್ ಕಾರ್ಯಕರ್ತರು ‘ಬಿಜೆಪಿ ತೆರಿಗೆ ಮರುಪಾವತಿ’ ಅಭಿಯಾನದ ಅಂಗವಾಗಿ ಕೂಪನ್ ವಿತರಿಸಿದರು.‌

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ‘ಲಾಕ್‌ಡೌನ್ ಸಂದರ್ಭದಲ್ಲಿ ಆರ್ಥಿಕ ಸ್ಥಿತಿ ಸುಧಾರಿಸುವ ಕ್ರಮ ಕೈಗೊಳ್ಳಬೇಕಿದ್ದ ಮೋದಿ ಸರ್ಕಾರ ಜನರ ಜೇಬಿಗೆ ಕೈಹಾಕಿ ಲೂಟಿ ಮಾಡುತ್ತಿದೆ. ಏಳು ವರ್ಷಗಳಲ್ಲಿ ಇಂಧನದ ಮೇಲಿನ ತೆರಿಗೆಯನ್ನು ಶೇ 310ರಷ್ಟು ಹೆಚ್ಚಿಸುವ ಮೂಲಕ ಬಿಜೆಪಿ ಸರ್ಕಾರ ಹಗಲು ದರೋಡೆಗಿಳಿದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ವಿಧಾನಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಡಾ. ಕಿರಣ ದೇಶಮುಖ
ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.