ಕಲಬುರ್ಗಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವ ಕೇಂದ್ರದ ಬಿಜೆಪಿ ಸರ್ಕಾರದ ಕ್ರಮ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಪಕ್ಷದ ಕಚೇರಿಯಿಂದ ಪೆಟ್ರೋಲ್ ಬಂಕ್ ವರೆಗೆ ಸೈಕಲ್ ಜಾಥಾ ನಡೆಸಿದರು.
ಪಕ್ಷದ ಮುಖಂಡ, ಮಾಜಿ ಸಚಿವ ಬಸವರಾಜ ರಾಯರೆಡ್ಡಿ ನೇತೃತ್ವದಲ್ಲಿ ನಡೆದ ಜಾಥಾದಲ್ಲಿ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ಡಾ. ಅಜಯ್ ಸಿಂಗ್, ಪಕ್ಷದ ವಕ್ತಾರ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ, ಅಫಜಲಪುರ ಶಾಸಕ ಎಂ.ವೈ. ಪಾಟೀಲ, ಮಾಜಿ ಶಾಸಕ ಬಿ.ಆರ್. ಪಾಟೀಲ, ವಿಧಾನಪರಿಷತ್ ಮಾಜಿ ಸದಸ್ಯರಾದ ಅಲ್ಲಮಪ್ರಭು ಪಾಟೀಲ, ತಿಮ್ಮಣ್ಣಪ್ಪ ಕಮಕನೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಮೇಯರ್ ಶರಣು ಮೋದಿ ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜ ರಾಯರೆಡ್ಡಿ, ಭಾರತ ಸರ್ಕಾರ ಕಳೆದ ವರ್ಷ ಒಪೆಕ್ ರಾಷ್ಟ್ರಗಳಿಂದ ಖರೀದಿಸಿದ್ದ ತೈಲವನ್ನು ಕಡಿಮೆ ದರದಲ್ಲಿ ಮಾರುಕಟ್ಟೆಗೆ ಬಿಡುವ ಬದಲು ಹೆಚ್ಚಿನ ತೆರಿಗೆ ಹಾಕಿ ಜನರನ್ನು ಸುಲಿಗೆ ಮಾಡುತ್ತಿದೆ. ಬಿಜೆಪಿ ಸರ್ಕಾರ ಟ್ರೇಡಿಂಗ್ ಕಂಪನಿಯಾಗಿದ್ದು, ನರೇಂದ್ರ ಮೋದಿ ಅವರು ಅದರ ಪ್ರಧಾನ ಗುಮಾಸ್ತರಾಗಿದ್ದಾರೆ. ಅತಿಯಾದ ತೆರಿಗೆಯಿಂದಾಗಿ ಜನರನ್ನು ಲೂಟಿ ಹೊಡೆಯಲು ತಮ್ಮ ಕಾರ್ಪೊರೇಟ್ ಗೆಳೆಯರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಟೀಕಿಸಿದರು.
ಮೋದಿ ಅವರು ಆಡಳಿತ ನಡೆಸಲು ಅಯೋಗ್ಯರಾಗಿದ್ದು, ಕೂಡಲೇ ಕುರ್ಚಿಯಿಂದ ಇಳಿಯಬೇಕು. ಅಚ್ಛೆ ದಿನ್ ಹೆಸರಲ್ಲಿ ಜನರಿಗೆ ಮಂಕುಬೂದಿ ಎರಚಿದ್ದು ಸಾಕು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.