ಚಿಂಚೋಳಿ: ತಾಲ್ಲೂಕಿನ ಸಾಲೇಬೀರನಹಳ್ಳಿ– ಹಸರಗುಂಡಗಿ ರಸ್ತೆ ನಿರ್ಮಾಣ ಆಮೆಗತಿಯಲ್ಲಿ ಸಾಗಿದ್ದರಿಂದ ಜನರಿಗೆ ತೊಂದರೆಯಾಗುತ್ತಿದೆ.
ಹಳೆಯ ರಸ್ತೆ ಅಗೆದು ಅದರ ಮೇಲೆ ಕಾಂಕ್ರಿಟ್ ಹರಡಲಾಗಿದೆ. ಜತೆಗೆ ಎರಡು ಬದಿಗೆ ಮುರುಮ್ ಹಾಕಲಾಗುತ್ತಿದೆ. ಆದರೆ ಕಾಂಕ್ರಿಟ್ ರಸ್ತೆಯಲ್ಲಿ ಎದ್ದು ನಿಂತಿದ್ದು, ವಾಹನ ಸವಾರರು ಪ್ರಯಾಸ ಪಡುವಂತಾಗಿದೆ.
ಕೆಕೆಡಿಬಿ ಅಡಿಯಲ್ಲಿ ₹1.5 ಕೋಟಿ ಹಾಗೂ ಡಿಎಂಎಫ್ ಅಡಿಯಲ್ಲಿ ₹64 ಲಕ್ಷ ಹೀಗೆ ಒಟ್ಟು ₹2.14 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ 4 ಕಿ.ಮೀ ರಸ್ತೆ ನಿರ್ಮಾಣ ಜನರನ್ನು ಹೈರಾಣಾಗಿಸಿದೆ.
ಚಿಮ್ಮನಚೋಡ ಗ್ರಾಮಕ್ಕೆ ಹೋಗುವವರಿಗೆ ಹಾಗೂ ಬರುವವರಿಗೆ ತೀವ್ರ ತೊಂದರೆಯಾಗುತ್ತಿದೆ.
ಸಾಲೇಬೀರನಹಳ್ಳಿ ಹಾಗೂ ಹಸರಗುಂಡಗಿ ಗ್ರಾಮಸ್ಥರು ನಿತ್ಯ ಬೀದರ್ಗೆ ಹೋಗುತ್ತಾರೆ. ಅವರು ಇದೇ ರಸ್ತೆ ಅವಲಂಭಿಸಿದ್ದು, ಬೈಕ್ ಸವಾರರು ಬೀಳುತ್ತಿದ್ದಾರೆ ಎಂದು ಸಾಲೇಬೀರನಹಳ್ಳಿಯ ವಿಶ್ವನಾಥರೆಡ್ಡಿ ದೂರಿದ್ದಾರೆ.
ರೋಡ್ ರೋಲರ್ ಓಡಿಸಿದರೂ ಕಾಂಕ್ರಿಟ್ ನಿಲ್ಲುತ್ತಿಲ್ಲ. ಜನರಿಗೆ ಅನುಕೂಲವಾಗಲೆಂದು ಮೊದಲಿಗೆ ರಸ್ತೆಯ ಎರಡು ಬದಿಗೆ ಭುಜದಲ್ಲಿ ಮುರುಮ್ ಭರ್ತಿ ಮಾಡಲಾಗಿದೆ. 2, 3 ದಿನಗಳಲ್ಲಿಯೇ ಸಮಸ್ಯೆ ಪರಿಹರಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಶಾಖಾಧಿಕಾರಿ ರೇವಣಸಿದ್ದಪ್ಪ ಪಾಟೀಲ ತಿಳಿಸಿದರು.
ಈಗಾಗಲೇ ಕಾರ್ಯಪಾಲಕ ಎಂಜಿನಿಯರ್ ಕೃಷ್ಣಾ ಅಗ್ನಿಹೋತ್ರಿ ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆನಂದ ಕಟ್ಟಿ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದರು.
ಪಿಡಬ್ಲ್ಯುಡಿ ಪಿಆರ್ಇ ದರಪಟ್ಟಿ: ಸಾಲೇಬೀರನಹಳ್ಳಿ ಹರಸಗುಂಡಗಿ ಗ್ರಾಮೀಣ ರಸ್ತೆಯಾದ ಇದನ್ನು ಮೇಲ್ದರ್ಜೆಗೇರಿಸಿ ಜಿಲ್ಲಾಮುಖ್ಯರಸ್ತೆ(ಎಂಡಿಆರ್)ಯಾಗಿ ಘೋಷಿಸಲಾಗಿದೆ. ಇನ್ನೂ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿಲ್ಲ. ಕೆಕೆಡಿಬಿ ಮತ್ತು ಡಿಎಂಎಫ್ ಅಡಿಯಲ್ಲಿ ಗ್ರಾಮೀಣ ರಸ್ತೆ ಇರುವುದರಿಂದ ಪಂಚಾಯತ ರಾಜ್ ಇಲಾಖೆಯ ದರಪಟ್ಟಿ ಅನುಸರಿಸಿ ಅಂದಾಜು ಪಟ್ಟಿ ತಯಾರಿಸಲಾಗಿದೆ. ಇದರಿಂದಲೇ ಸಮಸ್ಯೆಯಾಗುತ್ತಿದೆ ಎಂದು ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.