ಕಲಬುರ್ಗಿ: ಕೋವಿಡ್ 19ನಿಂದ ನಗರದಲ್ಲಿ ಎರಡನೇ ಸಾವು ಸಂಭವಿಸಿದ್ದರಿಂದ ಜಿಲ್ಲಾಡಳಿತ ನಗರದಲ್ಲಿ ನಿಷೇಧಾಜ್ಞೆಯನ್ನು ಬಿಗಿಗೊಳಿಸಿದ್ದು, ಗುರುವಾರ ನಗರದ ರಿಲಯನ್ಸ್, ಬಿಗ್ ಬಜಾರ್ ಸೇರಿದಂತೆ ಎಲ್ಲ ಸೂಪರ್ ಮಾರ್ಕೆಟ್ ಹಾಗೂ ಕಿರಾಣಿ, ದಿನಸಿ ಅಂಗಡಿಗಳನ್ನು ಬಂದ್ ಮಾಡಿದೆ.
ಜಿಲ್ಲೆಯಲ್ಲಿ ಒಟ್ಟಾರೆ 9 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ದೆಹಲಿಯ ತಬ್ಲಿಗಿ ಸಮಾವೇಶದಿಂದ ವಾಪಸಾದ 26 ಜನರ ಸಂಪರ್ಕ ಬಂದವರ ಪತ್ತೆ ಕಾರ್ಯವೂ ನಡೆಯುತ್ತಿದೆ. ಆದರೆ, ಕೆಲ ಸೋಂಕಿತರು ಸೂಕ್ತ ಮಾಹಿತಿ ನೀಡುತ್ತಿಲ್ಲವಾದ್ದರಿಂದ ಜಿಲ್ಲಾಡಳಿತಕ್ಕೆ ಸೋಂಕು ನಿಯಂತ್ರಣಕ್ಕೆ ತರುವುದೇ ಸವಾಲಾಗಿದೆ.
ಹೀಗಾಗಿ, ಜನರು ಹೊರಬರುವುದನ್ನು ತಡೆಯಲು ಕಿರಾಣಿ ಅಂಗಡಿ, ಸೂಪರ್ ಮಾರ್ಕೆಟ್ ಬಂದ್ ಮಾಡುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದರಿಂದ ಒತ್ತಾಯಪೂರ್ವಕವಾಗಿ ಅಂಗಡಿಗಳನ್ನು ಬಂದ್ ಮಾಡಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ನಂದಿನಿ ಮಿಲ್ಕ್ ಪಾರ್ಲರ್ ಗಳನ್ನೂ ಬಂದ್ ಮಾಡಲಾಗಿದೆ. ಔಷಧಿ ಅಂಗಡಿ, ಆಸ್ಪತ್ರೆ ಹಾಗೂ ಲ್ಯಾಬೋರೇಟರಿಗಳು ಕಾರ್ಯನಿರ್ವಹಿಸುತ್ತಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.