ADVERTISEMENT

ಕೊರೊನಾ: ಕಲಬುರ್ಗಿಯಲ್ಲೀಗ ‘ಬೆಡ್‌’ ಜಟಾಪಟಿ

ಆರೈಕೆಗೆ ಕಾಂಗ್ರೆಸ್‌ ನೀಡಿದ 450 ಬೆಡ್‌ ಪಡೆಯಲು ಹಿಂದೇಟು ಆರೋಪ

ಗುರುರಾಜ ಬಿ.ಆರ್‌.
Published 8 ಆಗಸ್ಟ್ 2020, 4:00 IST
Last Updated 8 ಆಗಸ್ಟ್ 2020, 4:00 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಕಲಬುರ್ಗಿ: ಜಿಲ್ಲೆಯ ಕೊರೊನಾ ಸೋಂಕಿತರ ಆರೈಕೆಗಾಗಿ ರಾಜ್ಯಸಭಾ ಸದಸ್ಯ ಹಾಗೂ ಎಐಸಿಸಿ ಪ್ರಧಾನ ಕಾರ್ಯ
ದರ್ಶಿ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿರುವ 450 ಬೆಡ್‌ಗಳನ್ನು ಜಿಲ್ಲಾಡಳಿತ ಪಡೆದಿಲ್ಲ ಎಂಬುದು ಬಿಜೆಪಿ–ಕಾಂಗ್ರೆಸ್‌ ಮುಖಂಡರ ಮಧ್ಯೆ ಜಟಾಪಟಿಗೆ ಕಾರಣವಾಗಿದೆ.

‘ಬಿಜೆಪಿ ಶಾಸಕರ ಸೂಚನೆ ಮೇರೆಗೆ ಜಿಲ್ಲಾಡಳಿತ ಬೆಡ್‌ಗಳನ್ನು ಪಡೆಯುತ್ತಿಲ್ಲ’ ಎಂದು ಕಾಂಗ್ರೆಸ್‌ ಆರೋಪಿಸಿದೆ. ಆದರೆ, ಜಿಲ್ಲಾಧಿಕಾರಿ ಹಾಗೂ ಬಿಜೆಪಿ ಮುಖಂಡರು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಶರತ್ ಬಿ., ‘ಖರ್ಗೆ ಅವರು ನೀಡಿದ ಬೆಡ್‌ಗಳನ್ನು ನಾವು ಸ್ವೀಕರಿಸಿದ್ದೇವೆ. ಅಷ್ಟೂ ಬೆಡ್‌ಗಳನ್ನು ಒಂದೇ ಕಡೆ ಅಳವಡಿಸುವಷ್ಟು ದೊಡ್ಡ ಕೋವಿಡ್ ಆರೈಕೆ‌ ಕೇಂದ್ರಗಳಿಲ್ಲ. ಹಾಗಾಗಿ, ಅಗತ್ಯವೆನಿಸಿದಾಗ ಅವುಗಳನ್ನು ಬಳಸಿಕೊಳ್ಳುತ್ತೇವೆ. ಚಿತ್ತಾಪುರ, ಜೇವರ್ಗಿ, ಅಫಜಲಪುರದ ಹಾಗೂ ಕಲಬುರ್ಗಿ ನಗರದ ಕೋವಿಡ್ ಕೇರ್‌‌ ಕೇಂದ್ರಗಳಲ್ಲಿ ಬಳಸಿಕೊಳ್ಳಲಾಗುವುದು’ ಎಂದರು.

ADVERTISEMENT

ತಮ್ಮ ತಂದೆಯವರು ನೀಡಿದ ಬೆಡ್‌ಗಳು ಬಳಕೆಯಾಗದಿರುವ ಕುರಿತು ಟ್ವಿಟ್ಟರ್‌ನಲ್ಲಿ ನಿರಂತರ ಟೀಕಾ ಪ್ರಹಾರ ನಡೆಸಿರುವ ಶಾಸಕ ಪ್ರಿಯಾಂಕ್ ಖರ್ಗೆ ಅವರು, ‘ಕಾಂಗ್ರೆಸ್‌ ನೀಡಿದ್ದನ್ನು ಏಕೆ ಸ್ವೀಕರಿಸಬೇಕು ಎಂಬ ಸಂಕುಚಿತ ಮನೋಭಾವದಿಂದ ಬಿಜೆಪಿಯವರು ಜಿಲ್ಲಾಡಳಿತದ ಮೇಲೆ ಒತ್ತಡ ಹೇರಿದ್ದಾರೆ. ಅಗತ್ಯಬಿದ್ದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೊಗಳನ್ನು ಬೆಡ್‌ ಮೇಲೆ ಹಾಕಿಸಲು ಸಿದ್ಧರಿದ್ದೇವೆ. ಆಗಲಾದರೂ ತೆಗೆದುಕೊಳ್ಳಬಹುದೇನೋ‌’ ಎಂದು ವ್ಯಂಗ್ಯವಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ, ‘ಜಿಲ್ಲೆಗೆ ಖರ್ಗೆ ಅವರು ಒಟ್ಟು 550 ಬೆಡ್‌ಗಳನ್ನು ನೀಡಿದ್ದು, ಅದರಲ್ಲಿ 100 ಚಿತ್ತಾಪುರದ ಕೋವಿಡ್‌ ಕೇಂದ್ರದಲ್ಲಿವೆ. ಉಳಿದ 450 ಬೆಡ್‌ಗಳನ್ನು ಪಡೆಯಲು ನಿರಾಕರಿಸಲಾಗುತ್ತಿದೆ. ಪ್ರತಿ ಬೆಡ್‌ಗೆ ₹ 1 ಸಾವಿರ ಖರ್ಚಾಗಿದೆ. ರೋಗಿಗಳ ಹಿತದೃಷ್ಟಿಯಿಂದ ಬೆಡ್‌ ಪಡೆಯಬೇಕು’ ಎಂದರು.

ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ‘ಬೆಡ್‌ಗಳನ್ನು ಪಡೆಯುವ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿಲ್ಲ. ಅನಗತ್ಯವಾಗಿ ಕಾಂಗ್ರೆಸ್‌ ಮುಖಂಡರು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಬೆಡ್‌ ಪಡೆಯುವುದು ಬಿಡುವುದು ಜಿಲ್ಲಾಡಳಿತಕ್ಕೆ ಬಿಟ್ಟಿದ್ದು’ ಎಂದು ಸ್ಪಷ್ಟಪಡಿಸಿದರು.

ಬಸವೇಶ್ವರ ಆಸ್ಪತ್ರೆಯಲ್ಲಿ ಬಳಕೆ?

ಜಿಲ್ಲಾಡಳಿತ ಬೆಡ್‌ಗಳನ್ನು ನಿರಾಕರಿಸಿದರೂ ಅದನ್ನು ಬಸವೇಶ್ವರ ಆಸ್ಪತ್ರೆಯಲ್ಲಿರುವ ಕೋವಿಡ್‌ ರೋಗಿಗಳ ಆರೈಕೆಗೆಂದು ನೀಡಲು ಕಾಂಗ್ರೆಸ್‌ ಮುಖಂಡರು ಚಿಂತನೆ ನಡೆಸಿದ್ದಾರೆ. ಆಸ್ಪತ್ರೆಯಿಂದಲೇ ಕೋವಿಡ್‌ ಕೇರ್‌ ಕೇಂದ್ರವನ್ನು ಆರಂಭಿಸಲು ತೀರ್ಮಾನಿಸಲಾಗಿದ್ದು, ಅಲ್ಲಿ ಈ ಬೆಡ್‌ಗಳನ್ನು ಬಳಸಿಕೊಳ್ಳಲಾಗುವುದು ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.