ADVERTISEMENT

ಗುಣಮಟ್ಟದ ಕಾಳುಗಳೇ ವಾಪಸ್‌!

ಹೆಸರು ಕಾಳು ಖರೀದಿಯಲ್ಲಿ ಭ್ರಷ್ಟಾಚಾರದ ವಾಸನೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 12:57 IST
Last Updated 5 ಡಿಸೆಂಬರ್ 2019, 12:57 IST
ಚಿಂಚೋಳಿ ತಾಲ್ಲೂಕು ಚಿಮ್ಮನಚೋಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ವಾಪಸ್‌ ಕಳುಹಿಸಿದ ಹೆಸರು ಕಾಳುಗಳ ಚೀಲ
ಚಿಂಚೋಳಿ ತಾಲ್ಲೂಕು ಚಿಮ್ಮನಚೋಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ವಾಪಸ್‌ ಕಳುಹಿಸಿದ ಹೆಸರು ಕಾಳುಗಳ ಚೀಲ   

ಚಿಂಚೋಳಿ: ‘ತಾಲ್ಲೂಕಿನಲ್ಲಿ ಹೆಸರು ಕಾಳು ಖರೀದಿಯಲ್ಲಿ ಭ್ರಷ್ಟಾಚಾರದ ವಾಸನೆ ಬರತೊಡಗಿದೆ’ ಎಂದು ಕೃಷಿಕ, ಸಲಗರ ಬಸಂತಪುರ ಗ್ರಾ.ಪಂ ಸದಸ್ಯ ತೇಜುನಾಯಕ ಆರೋಪಿಸಿದ್ದಾರೆ.

‘ಬೆಂಬಲ ಬೆಲೆಗೆ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ, ಬೀಜಕ್ಕೆ ಸಂಗ್ರಹಿಸಿಡುವಂತಹ ಉತ್ತಮ ಗುಣಮಟ್ಟದ ಕಾಳುಗಳನ್ನು ಗುಣಮಟ್ಟದ ನೆಪವೊಡ್ಡಿ ವಾಪಸ್‌ ಕಳುಹಿಸಲಾಗಿದೆ. ಹಣ ನೀಡದ ಕಾರಣ ರೈತರ ಶೋಷಣೆ ನಡೆಸಲಾಗುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.

‘ನಮ್ಮ ಹೊಲದಲ್ಲಿ ಬೆಳೆದ ಹೆಸರು ಕಾಳುಗಳನ್ನು ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಚಿಮ್ಮನಚೋಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಖರೀದಿ ಕೆಂದ್ರದಲ್ಲಿ ಪರೀಕ್ಷಿಸಿ ಕಾಟಾ ಮಾಡಿಸಲಾಗಿದೆ. ಸಂಘದ ಕಾರ್ಯದರ್ಶಿಗಳು ಪರಿಶೀಲಿಸಿ ಕಾಳುಗಳನ್ನು ಪಡೆದಿದ್ದಾರೆ. ಅವುಗಳನ್ನು ಚಿಂಚೋಳಿಯ ಉಗ್ರಾಣಕ್ಕೆ ಕಳುಹಿಸಲಾಗಿದೆ. ಆದರೆ ಉಗ್ರಾಣದಲ್ಲಿ ಗುಣಮಟ್ಟ ಪರಿಶೀಲಿಸುವವರೊಬ್ಬರು ಇವುಗಳು ಸರಿಯಿಲ್ಲ ಎಂದು ವಾಪಸ್‌ ಕಳುಹಿಸಿದ್ದಾರೆ’ ಎಂದರು.

ADVERTISEMENT

‘ಒಟ್ಟು 137 ಕ್ವಿಂಟಲ್‌ ಹೆಸರುಕಾಳು ವಾಪಸ್‌ ಕಳುಹಿಸಿದ್ದಾರೆ. ಇದರಿಂದ ಸುಮಾರು 33 ರೈತರಿಗೆ ಅನ್ಯಾಯವಾಗಿದೆ. ಹಣ ನೀಡಿದರೆ ಕಳಪೆ ಹೆಸರುಕಾಳುಗಳನ್ನೂ ಉಗ್ರಾಣದಲ್ಲಿ ಇಟ್ಟುಕೊಳ್ಳುತ್ತಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ನಾವು ಸಂಘದಿಂದ ಹೆಸರುಕಾಳುಗಳನ್ನು ವಾಪಸ್‌ ಮನೆಗೆ ಒಯ್ಯುವುದಿಲ್ಲ. ನಾನು ಗ್ರಾಹಕ ನ್ಯಾಯಾಯದ ಮೊರೆ ಹೋಗಬೇಕಾಗುತ್ತದೆ’ ಎಂದು ಅವರು ಹೇಳಿದರು.

‘ಚಿಮ್ಮನಚೋಡ ಖರೀದಿ ಕೇಂದ್ರದಲ್ಲಿ 3000 ಕ್ವಿಂಟಲ್‌ ಹೆಸರು ಕಾಳು ಖರೀದಿಸಲಾಗಿದೆ. ಇದರಲ್ಲಿ ಕೊನೆಯ ಲಾರಿಯಲ್ಲಿ ಕಳುಹಿಸಿದ 137 ಕ್ವಿಂಟಲ್‌ ವಾಪಸ್‌ ಬಂದಿದೆ. ನಾವು ಅಸಹಾಯಕರಾಗಿದ್ದೇವೆ’ ಎಂದು ಪಿಕೆಪಿಎಸ್‌ ಕಾರ್ಯದರ್ಶಿ ಓಂಕಾರ ಮಠಪತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.