ADVERTISEMENT

ಕೋವಿಡ್ ಆರೈಕೆ ಕೇಂದ್ರ ಆರಂಭ

ಸ್ವಾಮಿನಾರಾಯಣ ಗುರುಕುಲ ಚಾರಿಟಬಲ್‌ ಟ್ರಸ್ಟ್, ಕಲಬುರ್ಗಿ ಸೈಕ್ಲಿಂಗ್ ಕ್ಲಬ್‌ನಿಂದ ಮಾದರಿ ಕಾರ್ಯ

​ಪ್ರಜಾವಾಣಿ ವಾರ್ತೆ
Published 8 ಮೇ 2021, 5:22 IST
Last Updated 8 ಮೇ 2021, 5:22 IST
ಕಲಬುರ್ಗಿಯ ಸ್ವಾಮಿನಾರಾಯಣ ಗುರುಕುಲ ಚಾರಿಟಬಲ್‌ ಟ್ರಸ್ಟ್ ಹಾಗೂ ಕಲಬುರ್ಗಿ ಸೈಕ್ಲಿಂಗ್ ಕ್ಲಬ್ ಸಹಯೋಗದಲ್ಲಿ ಆರಂಭಿಸಿದ 150 ಬೆಡ್‌ಗಳ ಕೋವಿಡ್‌ ಆರೈಕೆ ಕೇಂದ್ರವನ್ನು ಸಚಿವ ಮುರುಗೇಶ ನಿರಾಣಿ ಶುಕ್ರವಾರ ಉದ್ಘಾಟಿಸಿದರು
ಕಲಬುರ್ಗಿಯ ಸ್ವಾಮಿನಾರಾಯಣ ಗುರುಕುಲ ಚಾರಿಟಬಲ್‌ ಟ್ರಸ್ಟ್ ಹಾಗೂ ಕಲಬುರ್ಗಿ ಸೈಕ್ಲಿಂಗ್ ಕ್ಲಬ್ ಸಹಯೋಗದಲ್ಲಿ ಆರಂಭಿಸಿದ 150 ಬೆಡ್‌ಗಳ ಕೋವಿಡ್‌ ಆರೈಕೆ ಕೇಂದ್ರವನ್ನು ಸಚಿವ ಮುರುಗೇಶ ನಿರಾಣಿ ಶುಕ್ರವಾರ ಉದ್ಘಾಟಿಸಿದರು   

ಕಲಬುರ್ಗಿ:‌ ಇಲ್ಲಿನ ಸ್ವಾಮಿನಾರಾಯಣ ಗುರುಕುಲ ಚಾರಿಟಬಲ್‌ ಟ್ರಸ್ಟ್ ಹಾಗೂ ಕಲಬುರ್ಗಿ ಸೈಕ್ಲಿಂಗ್ ಕ್ಲಬ್ ಸಹಯೋಗದಲ್ಲಿ ಏರ್‌ಪೋರ್ಟ್‌ ಮಾರ್ಗದಲ್ಲಿರುವ ಸ್ವಾಮಿನಾರಾಯಣ ಗುರುಕುಲ ಶಾಲೆಯಲ್ಲಿ ಆರಂಭಿಸಿದ 150 ಬೆಡ್‌ಗಳ ಕೋವಿಡ್‌ ಆರೈಕೆ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ಶುಕ್ರವಾರ ಚಾಲನೆ ನೀಡಿದರು.

ಪ್ರಶಾಂತವಾದ ಸ್ಥಳದಲ್ಲಿ ಈ ಕೇಂದ್ರ ಸ್ಥಾಪಿಸಿದ್ದು ಸೋಂಕಿತರು ಮಾನಸಿಕ ಸ್ಥೈರ್ಯ ಹೊಂದುವಂತಿದೆ. ವಸತಿ ಸಹಿತ ಬೆಳಿಗ್ಗೆ ಯೋಗ, ನಂತರ ಕಾಡ (ಕಶಾಯ) ಹಾಗೂ ಉಪಾಹಾರ, ಮಧ್ಯಾಹ್ನದ ಊಟ, ಸಂಜೆ ಪೋಷಕಾಂಶಯುಕ್ತ ಉಪಾಹಾರ, ರಾತ್ರಿ ಊಟ ನೀಡಲಾಗುತ್ತದೆ. ಪ್ರತಿ ದಿನ ಮಧ್ಯಾಹ್ನ ದೊಡ್ಡ ಸಭಾಂಗಣದಲ್ಲಿ ಎಲ್‌ಸಿಡಿ ಪರದೆಯ ಮೇಲೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವಿಡಿಯೊ ಪ್ರದರ್ಶಿಸುವುದು, ಧ್ಯಾನ ಮುಂತಾದ ಕಾರ್ಯಕ್ರಮಗಳು ನೀಡಲಾಗುವುದು.

ಸಚಿವ ಪ್ರಶಂಸೆ: ‘ಕೋವಿಡ್‌ನಿಂದ ಚೇತರಿಸಿಕೊಳ್ಳಲು ಇಂಥ ವಾತಾವರಣ ಬಹಳ ಮುಖ್ಯ. ಇಷ್ಟೆಲ್ಲವನ್ನೂ ಉಚಿತವಾಗಿ ಮಾಡಿದ್ದು ಅಭಿನಂದನಾರ್ಹ. ಈ ಸಂಸ್ಥೆಗಳಿಗೆ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದಿಂದ ಏನು ಸಹಾಯ ಬೇಕೊ ಅದನ್ನು ಮಾಡಲು ನಾನು ಸಿದ್ಧ’ ಎಂದು ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ADVERTISEMENT

ಕಲಬುರ್ಗಿ ಸೈಕ್ಲಿಂಗ್ ಕ್ಲಬ್‌ನ ಅಧ್ಯಕ್ಷ ಕಿರಣ್ ಶೆಟ್ಟರ್ ಮಾತನಾಡಿ, ‘ಮಾಧ್ಯಮ ಮಿತ್ರರು ಹಗಲಿರುಳು ಸಮಾಜಕ್ಕಾಗಿ ಶ್ರಮಿಸುತ್ತಿರುವುದು ಅಭಿನಂದನೀಯ. ಸಂವಿಧಾನದ ನಾಲ್ಕನೇ ಸ್ತಂಭವೆಂದು ಪರಿಗಣಿಸುವ ಪತ್ರಿಕಾರಂಗದ ಎಲ್ಲರಿಗೂ ನಾವು ಬೆನ್ನೆಲೆಬಾಗಿ ನಿಲ್ಲಬೇಕಿದೆ. ಅದಕ್ಕಾಗಿ ಇಲ್ಲಿನ ಒಂದು ‍ಪ್ರತ್ಯೇಕ ವಾರ್ಡ್‌ ವ್ಯವಸ್ಥೆ, ಹತ್ತು ಬೆಡ್‌ಗಳನ್ನು ಮಾಧ್ಯಮದವರು ಹಾಗೂ ಅವರ ಪರಿವಾರದವರಿಗೆ ಮೀಸಲಿಡಲಾಗಿದೆ’ ಎಂದರು.

‘ಅದೇ ರೀತಿ ಬಾರ್‌ ಅಸೋಸಿಯೇಷನ್‌ ಸದಸ್ಯರಿಗೆ ವಿಶೇಷವಾದ ವಾರ್ಡಿನ ವ್ಯವಸ್ಥೆಯು ಕಲ್ಪಿಸಲಾಗುವುದು’ ಎಂದರು. ಸ್ವಾಮಿನಾರಾಯಣ ಗುರುಕುಲದ ಸ್ವಾಮೀಜಿ ಋಷಿ ಅವರು, ನೋ.ಎಂ. ಸ್ವಾಮೀಜಿ ಮಾತನಾಡಿದರು.

ಸಂಸದ ಡಾ.ಉಮೇಶ ಜಾದವ, ಎಚ್‌ಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ವಿಧಾನ ಪರಿಷತ್‌ ಸದಸ್ಯರಾದ ಬಿ.ಜಿ ಪಾಟೀಲ, ಶಶೀಲ್ ನಮೋಶಿ, ಶಾಸಕ ಡಾ.ಅವಿನಾಶ ಜಾಧವ, ಪತ್ರಕರ್ತರ ಸಂಘದ ಅಧ್ಯಕ್ಷರಾದ ಭವಾನಿ ಸಿಂಗ್ ಠಾಕೂರ್, ರಾಜ್ಯ ಸಮಿತಿ ಸದಸ್ಯರಾದ ದೇವೇಂದ್ರಪ್ಪ ಕಪನೂರ್, ಬಾರ್ ಅಸೋಸಿಯೇಷನ್‌ ಅಧ್ಯಕ್ಷ, ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.