ಕಲಬುರಗಿ: ರಾಜ್ಯ ಸರ್ಕಾರವು ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿರುವ ‘ರಾಜ್ಯ ಜಲ ನೀತಿ–2022‘ ಕುಡಿಯುವ ನೀರು, ನೀರಾವರಿ ಹಾಗೂ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಒದಗಿಸುವ ನೀರನ್ನು ವ್ಯಾಪಕವಾಗಿ ಖಾಸಗೀಕರಣಗೊಳಿಸುವ ಮತ್ತು ದುರುದ್ದೇಶ ಹೊಂದಿದೆ. ಇದು ರಾಜ್ಯದ ಅಭಿವೃದ್ದಿಗೆ ಮಾರಕ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್ವಾದಿ) ಜಿಲ್ಲಾ ಘಟಕದ ಕಾರ್ಯದರ್ಶಿ ಕೆ. ನೀಲಾ ಟೀಕಿಸಿದ್ದಾರೆ.
‘ಕಾರ್ಪೊರೇಟ್ ಕಂಪನಿಗಳ ನೀತಿಯನ್ನು ನಡೆಸಲು ಆದ್ಯತೆ ನೀಡಲಾಗುತ್ತಿದೆ. ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ಕೊಡುವುದು ಮತ್ತು ನೀರಿನ ಕುರಿತುಗೆ ಜಾಗೃತಿ ಮೂಡಿಸುವುದು ಎಂದು ಹೇಳಲಾಗುತ್ತಿದೆ. ಆದರೆ, ಇದು ಜನರನ್ನು ದಾರಿ ತಪ್ಪಿಸುವ ತಂತ್ರವಾಗಿದೆ. ರಾಜ್ಯದಲ್ಲಿ ಬೀಳಾದ 50 ಲಕ್ಷ ಎಕರೆ ಜಮೀನಿನಲ್ಲಿ, ಮಳೆ ನೀರು ಸಂಗ್ರಹದ ಮೂಲಕ ಅಂತರ್ಜಲ ವೃದ್ಧಿಸಿ ನೀರಾವರಿಗೆ ಒಳಪಡಿಸುವ ರೈತರ ಆಶಯಕ್ಕೆ, ಈ ಅಂತರ್ಜಲ ಬಳಕೆ ಮೀಟರೀಕರಣ ವಿರುದ್ಧವಾಗಿದೆ’ ಎಂದಿದ್ದಾರೆ.
‘ರಾಜ್ಯದಾದ್ಯಂತ ಶುದ್ಧ ಕುಡಿಯುವ ನೀರಿನ ಖಾಸಗೀಕರಣದಿಂದ ಈಗಾಗಲೇ ಜನತೆ ಬೆಲೆತೆತ್ತು ಕುಡಿಯುವ ನೀರು ಖರೀದಿಸುತ್ತಿದ್ದಾರೆ. ಈಗ ಕುಡಿಯುವ ನೀರು ಮತ್ತು ಕೃಷಿ ನೀರಿಗೆ ಮೀಟರ್ ಅಳವಡಿಸಿ ಶುಲ್ಕ ವಿಧಿಸುವುದು, ಕುಡಿಯುವ ನೀರಿನ ಬೆಲೆ ಏರಿಕೆಗೆ ಮತ್ತು ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚ ಹೆಚ್ಚಳಕ್ಕೆ ಮತ್ತು ಆ ಮೂಲಕ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಲಿದೆ. ಜಲನೀತಿಯನ್ನು ಈ ಕೂಡಲೇ ಹಿಂಪಡೆಯಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.