ಕಲಬುರಗಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಯುವಕರ ಕೊಲೆಗಳು ನಡೆಯುವ ಮೂಲಕ ಕರಾವಳಿಯಲ್ಲಿ ಕೊಲೆಗಡುಕ ರಾಜಕಾರಣ ನಡೆದಿದೆ ಎಂದು ಭಾರತ ಕಮ್ಯುನಿಸ್ಟ್ (ಮಾರ್ಕ್ಸ್ವಾದಿ–ಸಿಪಿಎಂ) ಪಕ್ಷ ಟೀಕಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ, ‘ಕಳೆದ ಮೂರು, ನಾಲ್ಕು ದಿನಗಳಲ್ಲಿ ಸುಳ್ಯದಲ್ಲಿ ಎರಡು ಮತ್ತು ಸುರತ್ಕಲ್ನಲ್ಲಿ ಒಂದು ಒಟ್ಟು ಮೂವರ ಕೊಲೆಗಳಾಗಿವೆ. ಇದರಿಂದ ಜಿಲ್ಲೆ ಮತ್ತು ರಾಜ್ಯ ತಲ್ಲಣಗೊಂಡಿವೆ. ಮತಾಂಧ ಹಾಗೂ ಕೊಲೆಗಡುಕ ಹೇಡಿತನದ ರಾಜಕಾರಣ ಖಂಡನೀಯ. ಈ ಕೊಲೆಗಡುಕ ರಾಜಕಾರಣವು ರಾಜ್ಯದ ಅಭಿವೃದ್ಧಿಗೆ ಮತ್ತು ಸೌಹಾರ್ದತೆಗೆ ಅಪಾಯವನ್ನುಂಟು ಮಾಡಲಿದೆ. ರಾಜ್ಯ ಸರ್ಕಾರ ಈ ಕೂಡಲೇ, ಈ ಎಲ್ಲ ಕೊಲೆಗಳ ನೆಲೆಯನ್ನು ಭೇದಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
‘ಈ ಕೊಲೆಗಳ ಹಿನ್ನೆಲೆಯಲ್ಲಿ ಕೋಮು ಸೌಹಾರ್ದತೆಗೆ ಭಂಗ ಉಂಟು ಮಾಡುವ ಶಕ್ತಿಗಳ ನಿಗ್ರಹಕ್ಕೂ ಹಾಗೂ ಮತಾಂಧ ರಾಜಕಾರಣಕ್ಕೆ ಕೊನೆ ಹಾಡಲು ರಾಜ್ಯ ಸರ್ಕಾರ ಅಗತ್ಯ ಕ್ರಮವಹಿಸಬೇಕು. ಜನತೆ ಶಾಂತಿ ಹಾಗೂ ಸೌಹಾರ್ದತೆ ಮೆರೆಯಬೇಕು’ ಎಂದು ಮನವಿ ಮಾಡಿದೆ.
ರಾಜ್ಯದ ಮುಖ್ಯಮಂತ್ರಿ ಕೊಲೆಗೀಡಾದ ಪ್ರವೀಣ ಕುಟುಂಬವನ್ನು ಸಂತೈಷಿ ₹ 25 ಲಕ್ಷ ಪರಿಹಾರ ನೀಡಿರುವುದು ಸ್ವಾಗತಾರ್ಹವಾಗಿದೆ. ಅದೇ ರೀತಿ, ಇಂತಹ ಮತಾಂಧತೆಗೆ ಬಲಿಯಾದ ನರಗುಂದದ ಸಮೀರ್, ಸುಳ್ಯದ ಮಹಮದ್ ಮಸೂದ್ ಹಾಗೂ ಸುರತ್ಕಲ್ ನ ಮಹಮದ್ ಫಾಸಿಲ್ ಅವರ ಕುಟುಂಬಗಳಿಗೂ ತಲಾ ₹ 25 ಲಕ್ಷ ಪರಿಹಾರವನ್ನು ನೀಡಬೇಕು. ವಿಚಾರದಲ್ಲಿ ಸರ್ಕಾರ ತಾರತಮ್ಯ ಎಸಗಬಾರದು. ಸರ್ಕಾರ ತನ್ನ ತಾರತಮ್ಯ ನೀತಿಯನ್ನು ಕೈಬಿಟ್ಟು ಈ ಕುಟುಂಬಗಳಿಗೆ ತಕ್ಷಣವೇ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.