ADVERTISEMENT

ವಿವಿಧ ಬೆಳೆ ಹಾನಿ: ಪರಿಹಾರ ನೀಡಿ- ಬಿ.ಆರ್.ಪಾಟೀಲ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 4:05 IST
Last Updated 1 ಅಕ್ಟೋಬರ್ 2021, 4:05 IST
ಬಿ.ಆರ್‌.ಪಾಟೀಲ
ಬಿ.ಆರ್‌.ಪಾಟೀಲ   

ಕಲಬುರ್ಗಿ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿ ಕುರಿತು ಸಮೀಕ್ಷೆ ನಡೆಸಿ ರೈತರಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಬಿ.ಆರ್.ಪಾಟೀಲ ಒತ್ತಾಯಿಸಿದರು.‌‌

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ತಿಂಗಳಲ್ಲಿ ಸುರಿದ ಮಳೆಗೆ ಅಪಾರ ಬೆಳೆ ಹಾನಿ ಸಂಭವಿಸಿದೆ. ಆದರೆ, ಈವರೆಗೂ ಕೃಷಿ ಸಚಿವರು, ಜಿಲ್ಲಾ ಉಸ್ತುವರಿ ಸಚಿವರು, ಅಧಿಕಾರಿಗಳು ಜಿಲ್ಲೆಗೆ ಬಂದು ಈ ಬಗ್ಗೆ ಪರಿಶೀಲನೆ ನಡೆಸಿಲ್ಲ ಎಂದರು.

ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 7,48,485 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಅದರಲ್ಲಿ 5,12,493 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಆಗಿದೆ. ಕಳೆದ ಕೆಲವು ದಿನಗಳ ಹಿಂದೆ ಸುರಿದ ಮಳೆಗೆ ಹೊಲದಲ್ಲಿ ನೀರು ನಿಂತು ಬೆಳೆ ಕೈಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ADVERTISEMENT

ಕೇಂದ್ರ ಸರ್ಕಾರ ಹೆಸರು ಬೆಳೆಗೆ ₹7,275 ಎಂಎಸ್‌ಪಿ ದರ ನಿಗದಿ ಮಾಡಿದೆ. ಆದರೆ, ಮಾರುಕಟ್ಟೆಯಲ್ಲಿ ₹5 ಸಾವಿರದಿಂದ ₹5,500 ದರ ಇದೆ. ಈಗಾಗಲೇ ಹೆಸರು ರಾಶಿ ಮುಗಿದಿದೆ. ರೈತರು ಹೆಸರು ಮಾರಾಟಕ್ಕೆ ಮುಂದಾಗಿದ್ದಾರೆ. ಆದರೆ, ಎಂಎಸ್‌ಪಿ ದರ ಮಾತ್ರ ಸಿಗುತ್ತಿಲ್ಲ. ಮಳೆಯಿಂದಾಗಿ ಸೂರ್ಯಕಾಂತಿ, ಸೋಯಾಬಿನ್ ಬೆಳೆ ರಾಶಿ ಮಾಡಲು ಅಗುತ್ತಿಲ್ಲ ಎಂದರು.

‌ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದಿಂದ ರೈತರಿಗಾಗಿ ಕೃಷಿ ಜ್ಞಾನ ಕೇಂದ್ರ ತೆರೆಯಲಾಗುವುದು ಎಂದು ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಅವರು ಹೇಳಿದ್ದಾರೆ. ರೈತರಿಗೆ ಇಂತಹ ಜ್ಞಾನ ಕೇಂದ್ರಗಳ ಅಗತ್ಯ ಇಲ್ಲ. ಅದರ ಬದಲು ನಗದು ಪರಿಹಾರ ಕೊಡಿಸುವ ವ್ಯವಸ್ಥೆ ಮಾಡಿ ಎಂದರು.

ಕನ್ಹಯ್ಯ ಕುಮಾರ್ ಮತ್ತು ಜಿಗ್ನೇಶ್ ಮೇವಾನಿ ಅವರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಿಂದ ಶಕ್ತಿ ಬಂದಿದೆ ಎಂದರು. ಗಣೇಶ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.