ADVERTISEMENT

ಅಫಜಲಪುರ: ಬಿರುಗಾಳಿ, ಮಳೆಗೆ ಕಬ್ಬು, ತೊಗರಿ ಹಾನಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 14:23 IST
Last Updated 5 ಸೆಪ್ಟೆಂಬರ್ 2021, 14:23 IST
ಅಫಜಲಪುರ ತಾಲ್ಲೂಕಿನ ಕರಜಗಿ ಗ್ರಾಮದಲ್ಲಿ ಧಾರಾಕಾರ ಮಳೆ ಮತ್ತು ಬಿರುಗಾಳಿಗೆ ಕಬ್ಬು ನೆಲಕ್ಕೆ ಬಿದ್ದು, ಹಾಳಾಗಿದೆ
ಅಫಜಲಪುರ ತಾಲ್ಲೂಕಿನ ಕರಜಗಿ ಗ್ರಾಮದಲ್ಲಿ ಧಾರಾಕಾರ ಮಳೆ ಮತ್ತು ಬಿರುಗಾಳಿಗೆ ಕಬ್ಬು ನೆಲಕ್ಕೆ ಬಿದ್ದು, ಹಾಳಾಗಿದೆ   

ಅಫಜಲಪುರ: ತಾಲ್ಲೂಕಿನಲ್ಲಿ 2 ದಿನಗಳಿಂದ ಅಲ್ಲಲ್ಲಿ ಧಾರಾಕಾರ ಮಳೆ ಮತ್ತು ಬಿರುಗಾಳಿಗೆ ಸುಮಾರು 2 ಸಾವಿರ ಎಕರೆ ಕಬ್ಬು ನೆಲಕ್ಕೆ ಬಿದ್ದು ಹಾಳಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ತಾಲ್ಲೂಕಿನ ಕರಜಗಿ, ಅಫಜಲಪುರ, ಅತನೂರ 3 ಹೋಬಳಿಗಳಲ್ಲಿ ಕಬ್ಬು ಹೆಚ್ಚು ಹಾನಿಯಾಗಿದೆ. ಇನ್ನೂ ಮಳೆ ಮುಂದುವರೆದಿದ್ದು, ಇನ್ನೂ ಹೆಚ್ಚಿನ ಕಬ್ಬು ಹಾನಿಯಾಗುವ ಸಂಭವವಿದೆ ಎಂದು ರೈತರು ಹೇಳುತ್ತಿದ್ದಾರೆ.

ಈ ಕುರಿತು ಸಹಾಯಕ ಕೃಷಿ ನಿರ್ದೇಶಕ ಎಚ್‌.ಎಸ್.ಗಡಗಿಮನಿ ಮಾತನಾಡಿ, ಮಳೆ, ಗಾಳಿಗೆ ಅಲ್ಲಲ್ಲಿ ಕಬ್ಬಿಗೆ ಹಾನಿಯಾಗಿದೆ. ಇನ್ನೂ ಮಳೆ ಮುಂದುವರೆದಿದೆ. ಮಳೆ ನಿಂತ ನಂತರ ಹಾನಿ ಸಮೀಕ್ಷೆ ಮಾಡಲಾಗುವುದು ಎಂದು ತಿಳಿಸಿದರು.

ADVERTISEMENT

ತಾಲ್ಲೂಕಿನಲ್ಲಿ ಕಬ್ಬಿಗೆ ಆಗಿರುವ ಹಾನಿ ಕುರಿತು ಶಾಸಕರು, ಕೃಷಿ ಸಚಿವರ ಗಮನಕ್ಕೆ ತಂದು ಸರ್ಕಾರದಿಂದ ಹಾಳಾದ ಕಬ್ಬು ಸಮೀಕ್ಷೆ ಮಾಡಲು ಸರ್ಕಾರ ಆದೇಶ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಬಂದರವಾಡದ ಲಕ್ಷ್ಮಣ ಕಟ್ಟಿಮನಿ ಮಾತನಾಡಿ, ಬಿದ್ದಿರುವ ಕಬ್ಬು ಕಾರ್ಖಾನೆಯವರು ತೆಗೆದುಕೊಳ್ಳುವದಿಲ್ಲ. ಅದರಲ್ಲಿ ಸಕ್ಕರೆ ಅಂಶ ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ. ಸರ್ಕಾರ ನಮಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ನಿರಂತರ ಮಳೆಗೆ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ತೊಗರಿ ಹಣ್ಣು ಒಡೆದು, ಹಳದಿಯಾಗುತ್ತಿದ್ದು, ಬೆಳವಣಿಗೆ ಕುಂಠಿತವಾಗುತ್ತದೆ. ಇನ್ನೂ ಮಳೆ ಮುಂದುವರೆದರೆ ಸಂಪೂರ್ಣ ತೊಗರಿ ಹಾಳಾಗಿ ಹೋಗುತ್ತದೆ. ಇದರ ಬಗ್ಗೆಯೂ ಕೃಷಿ ಇಲಾಖೆಯವರು ಸಮೀಕ್ಷೆ ಮಾಡಬೇಕೆಂದು ರೈತ ಮುಖಂಡರಾದ ಶಿವು ಪ್ಯಾಟಿ, ವಿಜಯಕುಮಾರ ಪಾಟೀಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.