ADVERTISEMENT

ವಾಡಿ: ಅತಿವೃಷ್ಟಿ ತಂದೊಡ್ಡಿದ ಆತಂಕ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 2:30 IST
Last Updated 23 ಜುಲೈ 2021, 2:30 IST
ರವಿ ಹಾದಿಮನಿ
ರವಿ ಹಾದಿಮನಿ   

ವಾಡಿ:ಚಿತ್ತಾಪುರ ತಾಲ್ಲೂಕಿನಲ್ಲಿ ಹುಲುಸಾಗಿ ಬೆಳೆದಿದ್ದ ತೊಗರಿ, ಹೆಸರು, ಉದ್ದು ಹಾಗೂ ಹತ್ತಿ ಬೆಳೆಗಳು ಈಗ ಅತಿವೃಷ್ಟಿಗೆ ಸಿಲುಕಿ ನರಳುತ್ತಿವೆ. ಸತತ ಮಳೆಯಿಂದ ಬೆಳೆಗಳು ಹಾಳಾಗುತ್ತಿದ್ದು, ರೈತರ ಲೆಕ್ಕಾಚಾರ ತಪ್ಪುತ್ತಿದೆ.

ತೊಗರಿ, ಹೆಸರು, ಉದ್ದು ಬೆಳೆಗಳು ನೀರುಪಾಲಾಗುತ್ತಿದ್ದು, ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತರ ಚಿಂತೆಗೆ ಕಾರಣವಾಗಿದೆ. ಉತ್ತಮ ಮಳೆ ಬಂದಿದ್ದರಿಂದ ಖುಷಿಯಲ್ಲಿದ್ದ ರೈತರನ್ನು ಈಗ ಅದೇ ಮಳೆ ಸಂಕಷ್ಟಕ್ಕೆ ಸಿಲುಕಿಸಿದೆ.

ಹೆಸರು, ಉದ್ದು ಬೆಳೆಗಳು ಹೂವು ಕಾಯಿ ಕಟ್ಟುವ ಹಂತದಲ್ಲಿವೆ. ಆದರೆ, ಅತಿವೃಷ್ಟಿಯಿಂದ ಹೂವುಗಳು ಉದುರುತ್ತಿವೆ. ಹಸಿರಿನಿಂದ ನಳನಳಿಸ ಬೇಕಾಗಿದ್ದ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಅತಿವೃಷ್ಟಿಯಿಂದಬೆಳೆಗಳು ಕೀಟಬಾಧೆ ಹಾಗೂ ಕೊಳೆಬಾಧೆಗೆ ತುತ್ತಾಗುತ್ತಿವೆ. ನೆಲ ಹಸಿ ಹಿಡಿದ ಕಾರಣ ಕೃಷಿ ಚಟುವಟಿಕೆ ಸಂಪೂರ್ಣ ಸ್ತಬ್ಧಗೊಂಡಿದೆ. ಬೆಳೆಗಳಿಗೆ ವಕ್ಕರಿಸಿ ಕೊಳ್ಳುತ್ತಿರುವ ರೋಗಗಳಿಗೆ ಕೀಟನಾಶಕ ಸಿಂಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಚಿಂತೆಗೀಡಾಗಿದ್ದರೆ.

ADVERTISEMENT

ಪ್ರಸಕ್ತ ವರ್ಷ ಚಿತ್ತಾಪುರ ತಾಲ್ಲೂಕಿನಲ್ಲಿ ಒಟ್ಟು 114190 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಮಾಡಲಾಗಿದೆ. ಅದರಲ್ಲಿ 85500 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, ಹೆಸರು 16580 ಹೆಕ್ಟೇರ್, ಹತ್ತಿ 3700, ಉದ್ದು 7650 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಆದರೆ ಸತತ ಮಳೆಯಿಂದ ಬೆಳೆಗಳು ಹಾಳಾ ಗುತ್ತಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.

40 ಎಕರೆಯಲ್ಲಿ ಬಿತ್ತಿದ್ದ ತೊಗರಿ, ಹೆಸರು ಬೆಳೆಗಳು ಮಳೆಗೆ ಸಿಲುಕಿ ಹಾಳಾಗುತ್ತಿವೆ. ಸತತ ಮಳೆಯಿಂದ ಹಳದಿ ಬಣ್ಣಕ್ಕೆ ತಿರುಗಿ ಹಾಳಾಗುತ್ತಿವೆ. ದಿಕ್ಕೇ ತೋಚದಂತಾಗಿದೆ ಎಂದು ಅಳ್ಳೊಳ್ಳಿ ರೈತ ರವಿ ಹಾದಿಮನಿ ಅಲವತ್ತುಕೊಂಡರು.

* ಹೆಸರು ಚೆನ್ನಾಗಿ ಬರುತ್ತದೆ ಎಂದು ಲೆಕ್ಕ ಹಾಕಿದ್ದೆ. ಆದರೆ ಮಳೆ ನಮ್ಮ ಲೆಕ್ಕಾನೇ ಉಲ್ಟಾ ಮಾಡಿದೆ. ಸಾಲ ಮಾಡಿ ಒಕ್ಕಲುತನ ಮಾಡಿದ ನಮ್ಮ ಬದುಕಿಗೆ ಬರೆ ಬಿದ್ದಿದೆ

-ಸಾಬಣ್ಣ ಮುಷ್ಟಿಗೇರ, ಲಾಡ್ಲಾಪುರ ರೈತ

*40 ಎಕರೆಯಲ್ಲಿ ಬಿತ್ತಿದ್ದ ತೊಗರಿ, ಹೆಸರು ಬೆಳೆಗಳು ಮಳೆಗೆ ಸಿಲುಕಿ ಹಾಳಾಗುತ್ತಿವೆ. ಸತತ ಮಳೆಯಿಂದ ಹಳದಿ ಬಣ್ಣಕ್ಕೆ ತಿರುಗಿ ಹಾಳಾಗುತ್ತಿವೆ. ದಿಕ್ಕೇ ತೋಚದಂತಾಗಿದೆ

-ರವಿ ಹಾದಿಮನಿ, ಅಳ್ಳೊಳ್ಳಿ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.