ಆಳಂದ: 'ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ ಶೇ 80 ರೈತರ ಮುಂಗಾರು ಹಂಗಾಮಿನ ಬೆಳೆಗಳು ಸತತ ಮಳೆಗೆ ಹಾಳಾಗಿವೆ. ಸರ್ಕಾರ ಪ್ರತಿ ರೈತರಿಗೂ ಸಮರ್ಪಕ ಪರಿಹಾರ ನೀಡಬೇಕು’ ಎಂದು ನವ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ದಯಾನಂದ ಪಾಟೀಲ ಒತ್ತಾಯಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಮುಂದೆ ಮಂಗಳವಾರ ನವ ಕರ್ನಾಟಕ ರೈತ ಸಂಘದಿಂದ ರೈತರ ಬೆಳೆ ಹಾನಿಗೆ ಪರಿಹಾರಕ್ಕೆ ಒತ್ತಾಯಿಸಿ ಹಮ್ಮಿಕೊಂಡ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
ಜಿಲ್ಲೆಯ ಮುಖ್ಯ ವಾಣಿಜ್ಯ ಬೆಳೆ ತೊಗರಿ ಸೇರಿ ಉದ್ದು, ಹೆಸರು ಬೆಳೆಯೂ ಹಾನಿಯಾಗಿ ಇಳುವರಿ ಪ್ರಮಾಣ ಕುಸಿದಿದೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಬರಬೇಕು. ರೈತರ ಪ್ರತಿ ಟನ್ ಕಬ್ಬಿಗೆ ₹2800 ಬೆಂಬಲ ಬೆಲೆ ಘೋಷಿಸಬೇಕು. ಬೆಳೆ ವಿಮೆ ಪಾವತಿಸಿದ ರೈತರಿಗೆ ಯಾವದೇ ನೆರವು ಇನ್ಸೂರನ್ಸ್ ಕಂಪನಿಯಿಂದ ಬಂದಿಲ್ಲ, ಹೀಗೆ ಮುಂದುವರಿದರೆ ಹೋರಾಟ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶಿವಲಿಂಗಪ್ಪ ಪಾಟೀಲ, ರೈತ ಮುಖಂಡರಾದ ಅಮರನಾಥ ಝಳಕಿ, ಚಂದ್ರಕಾಂತ ಓಗೆ, ಸಂತೋಷ ಪಾಟೀಲ, ಬಸವರಾಜ ಹಿಪ್ಪರಗಿ, ಕಾಶಿನಾಥ ಜಿರೋಳ್ಳಿ, ಸಿದ್ದು ವೇದಶೆಟ್ಟಿ ಇದ್ದರು. ಈ ಮೊದಲು ಬಸ್ ನಿಲ್ದಾಣದಿಂದ ರೈತರೂ ಕೈಯಲ್ಲಿ ಹಾಳಾದ ತೊಗರಿ ಬೆಳೆ ಪ್ರದರ್ಶಿಸಿ ಪರಿಹಾರಕ್ಕೆ ಒತ್ತಾಯಿಸಿ ಘೋಷಣೆ ಕೂಗಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.