ಚಿಂಚೋಳಿ: ಹೈದರಾಬಾದ್ನಲ್ಲಿ ಹೋಟೆಲ್ನಲ್ಲಿ ದುಡಿಯುತ್ತಿದ್ದ ತಾಲ್ಲೂಕಿನ ಐನಾಪುರ ಗ್ರಾಮದ ರಾಜಕುಮಾರ ಅಂಕಲಗಿ (35) ಅವರನ್ನು ಶನಿವಾರ ರಾತ್ರಿ ಸ್ವಗ್ರಾಮಕ್ಕೆ ಅಧಿಕಾರಿಗಳ ಅನುಮತಿ ಪಡೆದು ಕರೆ ತಂದರೂ ಕೊರೊನಾ ಭೀತಿಯಿಂದ ದಾಯಾದಿಗಳು ಮನೆಗೆ ಸೇರಿಸಿಕೊಳ್ಳಲಿಲ್ಲ. ಅನ್ಯಮಾರ್ಗವಿಲ್ಲದೇ ಗ್ರಾಮದ ಹೊರವಲಯದ ಪ್ರೌಢಶಾಲೆ ಕೋಣೆಯೊಂದರಲ್ಲಿ ಇದ್ದ ಅವರು ಭಾನುವಾರ ಬೆಳಿಗ್ಗೆ ಕೊನೆಯುಸಿರೆಳೆದರು.
ರಾಜಕುಮಾರ ಅಂಕಲಗಿ ಮತ್ತು ಅವರ ಸಹೋದರ ಸಂಬಂಧಿಗಳ ಮನೆಗಳು ಒಂದೇ ವಠಾರದಲ್ಲಿವೆ. ರಾಜಕುಮಾರ ಅವರು ಪಾರ್ಶ್ವವಾಯುವಿಗೆ ತುತ್ತಾಗಿದ್ದು, ಅವರನ್ನು ಮನೆಯಲ್ಲಿ ಸೇರಿಸಿಕೊಳ್ಳುವಂತೆ ಸ್ಥಳೀಯ ಮುಖಂಡರಾದ ರಮೇಶ ಪಡಶೆಟ್ಟಿ ಮತ್ತು ರೇವಪ್ಪಉಪ್ಪಿನ ಸಂಬಂಧಿಕರಿಗೆ ತಿಳಿ ಹೇಳಿದರು. ಆದರೂ ಅದಕ್ಕೆ ಒಪ್ಪಿಗೆ ಸಿಗದ ಕಾರಣ ರಾಜಕುಮಾರ ಅವರನ್ನು ಶಾಲೆಯ ಕೋಣೆಯಲ್ಲಿ ಇರಿಸಲಾಗಿತ್ತು.
ಅಂತ್ಯಕ್ರಿಯೆಗೆ ಶವ ಸಾಗಿಸಲು ಎತ್ತಿನ ಬಂಡಿ ನೀಡುವಂತೆ ಕೋರಿದರೂ ದಾಯಾದಿಗಳು ಸ್ಪಂದಿಸಲಿಲ್ಲ. ಟ್ರ್ಯಾಕ್ಟರ್ ಇದ್ದವರೂ ಸಹ ಕೊಡಲಿಲ್ಲ. ಕೊನೆಗೆ ಇದರಿಂದ ಮನನೊಂದು ಮುಖಂಡರು ಗ್ರಾಮ ಪಂಚಾಯಿತಿಯ ಕಸ ಸಾಗಿಸುವ ವಾಹನದಲ್ಲಿ ಮೃತದೇಹ ಸಾಗಿಸಿದರು. ವೈರಾಣು ನಾಶಕ ಸಿಂಪಡಿಸಿದ ಬಳಿಕ ಪಿಎಸ್ಐ ರಾಜಶೇಖರ ರಾಠೋಡ್ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿತು.
ಶವವನ್ನು ಪತ್ನಿ, ಅಣ್ಣ ಮತ್ತು ತಾಯಿ ಮಾತ್ರ ಸ್ಪರ್ಶಿಸಿದರು. ನಂತರ ಅವರೇ ಅಂತ್ಯಕ್ರಿಯೆ ನೆರವೇರಿಸಿದರು.
ಮುಂಜಾಗ್ರತಾ ಕ್ರಮವಾಗಿ ಅವರನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.