ADVERTISEMENT

ಚಿತ್ತಾಪುರ ಜಿಲ್ಲೆ ರಚನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 3:01 IST
Last Updated 23 ಫೆಬ್ರುವರಿ 2021, 3:01 IST
ವಿಠಲ್ ದೊಡ್ಡಮನಿ
ವಿಠಲ್ ದೊಡ್ಡಮನಿ   

ಚಿತ್ತಾಪುರ: ಚಿತ್ತಾಪುರವನ್ನು ಹೊಸ ಜಿಲ್ಲೆಯನ್ನಾಗಿ ಘೋಷಿಸುವಂತೆ ಒತ್ತಾಯಿಸಿ ಪಕ್ಷಾತೀತವಾಗಿ ಹೋರಾಟ ಸಂಘಟಿಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ವಿಠಲ್ ದೊಡ್ಡಮನಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲೆ ಚಿತ್ತಾಪುರ ಅತ್ಯಂತ ದೊಡ್ಡ ತಾಲ್ಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಹುಂಡೆಕಾರ ಮತ್ತು ಗದ್ದಿಗೌಡರ ಸಮಿತಿ ವರದಿಯಂತೆ ತಾಲ್ಲೂಕು ವಿಭಜನೆ ಮಾಡಿ ಕಾಳಗಿ ಮತ್ತು ಶಹಾಬಾದ್ ತಾಲ್ಲೂಕು ರಚಿಸಲಾಗಿದೆ.ಸೇಡಂ ತಾಲ್ಲೂಕು ಕಲಬುರ್ಗಿ ಜಿಲ್ಲೆಯ ಗಡಿ ಪ್ರದೇಶ ಮತ್ತು ನೆರೆಯ ರಾಜ್ಯ ತೆಲಂಗಾಣ ಗಡಿಗೆ ಹೊಂದಿಕೊಂಡಿದೆ. ಸೇಡಂಗೆ ಸಮೀಪವಾಗಿರುವ ಚಿತ್ತಾಪುರ ಹೊಸ ಜಿಲ್ಲೆ ರಚನೆಗೆ ಯೋಗ್ಯವಾಗಿದೆ ಎಂದು ಹೇಳಿದರು.

ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ ಅವರು ಚಿತ್ತಾಪುರ ಜಿಲ್ಲೆಯಾಗಿ ಮಾಡಬೇಕು ಎಂದು ಹೇಳದೆ ಬಹುದೊಡ್ಡ ತಪ್ಪು ಮಾಡಿದ್ದಾರೆ. ಈಗ ಅವರಿಗೆ ತಪ್ಪಿನ ಅರಿವಾಗಿದೆ. ತಪ್ಪು ಮಾಡಿಕೊಂಡವರು ತಿದ್ದಿಕೊಳ್ಳಬೇಕು. ಹೋರಾಟಕ್ಕೆ ಸಲಹೆ ಕೊಡಬೇಕು. ವಿರುದ್ದ ಹೇಳಿಕೆ, ರಾಜಕೀಯ ಆರೋಪ ಮಾಡುವುದನ್ನು ಯಾರು ಮಾಡಬಾರದು ಎಂದರು.

ADVERTISEMENT

ಜಿಲ್ಲೆ ರಚನೆಯ ಹೊರಾಟಕ್ಕಾಗಿ ಅತೀ ಶೀಘ್ರದಲ್ಲಿ ಎಲ್ಲ ರಾಜಕೀಯ ಪಕ್ಷಗಳು, ಸಂಘಟನೆಗಳು ಒಳಗೊಂಡ ಸಮಿತಿ ರಚಿಸಿ ಹೋರಾಟ ರೂಪಿಸುತ್ತೇವೆ. ಚಿತ್ತಾಪುರದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು ಹಾಗೂ ಪ್ರತಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರು ಹಾಗೂ ಎಲ್ಲಾ ಗ್ರಾಮಗಳ ಗ್ರಾಮಸ್ಥರು ಹೋರಾಟಕ್ಕೆ ಅಣಿಯಾಗಬೆಕು. ಈ ಕುರಿತು ಸಮಿತಿಯಿಂದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ತ್ವರಿತವಾಗಿ ಮಾಡಲಾಗುವುದು ಎಂದು ಹೇಳಿದರು.

ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ, ವಕೀಲರ ಸಂಘದ ಮಾಜಿ ಅಧ್ಯಕ್ಷ ಚಂದ್ರಶೆಖರ ಅವಂಟಿ, ಪುರಸಭೆ ಸದಸ್ಯರಾದ ಗೋವಿಂದ ನಾಯಕ, ಶೀಲಾ ಕಾಶಿ, ಮಲ್ಲಿಕಾರ್ಜುನ ಕಾಳಗಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ದೀಪಕ್ ಹೊಸೂರಕರ್, ಮಾಜಿ ಅಧ್ಯಕ್ಷ ಸೂರ್ಯಕಾಂತ ಪುಜಾರಿ, ಮುಖಂಡರಾದಮುಕ್ತಾರ್ ಪಟೇಲ್, ಈರಪ್ಪ ಭೋವಿ, ಎಂ.ಎ ರಸೀದ್, ಮಲ್ಲಿಕಾರ್ಜುನರೆಡ್ಡಿ ಇಜಾರ್, ನಾಗರೆಡ್ಡಿ ಗೋಪಸೇನ್, ಶಿವಾಜಿ ಕಾಶಿ, ಉದಯಕುಮಾರ ಸಾಗರ, ಮಹೇಶ ಕಾಶಿ, ಲಕ್ಷ್ಮಿಕಾಂತ ಸಾಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.